ಒಮ್ಮೆ ಜಿಬ್ರೀಲ್ ಅ.ಸ ನೆಬಿ ಸ.ಅ ರವರ ಬಳಿ ಬಂದು ಇಸ್ರಾಯೀಲ್ ಸಮುದಾಯದ ಅಲ್ಲಾಹನ ಇಷ್ಟದಾಸರುಗಳಲ್ಲೋರ್ವರಾದ ಶಮೂನುಲ್ ಗಾಝೀ ಎಂಬವರ ಧೀರ ಚರಿತ್ರೆಯನ್ನು ಹೇಳಿದರು. ಶಮೂನುಲ್ ಗಾಝೀ ಎಂಬ ಮಹಾನರು ಸಾವಿರ ತಿಂಗಳು ಕಾಲ ಸತ್ಯ ನಿಷೇಧಿಗಳೊಂದಿಗೆ ಹೋರಾಡಿದ ಒಬ್ಬ ಮಹಾ ಶೂರರಾಗಿದ್ದರು. ಒಂಟೆಯ ಗಡ್ಡ ಮೂಲೆಯ ಎಲುಬು ಅವರ ಒಂದೇ ಒಂದು ಆಯುಧವಾಗಿತ್ತು. ಬೇರೆ ಯಾವುದೇ ಯುದ್ಧಾಯುಧ ಅವರ ಬಳಿ ಇರಲಿಲ್ಲ. ಆ ಆಯುಧದಿಂದ ಸತ್ಯ ನಿಷೇಧಿಗಳಿಗೆ ಹೊಡೆದರೆ ಅಸಂಖ್ಯಾತ ಸತ್ಯ ನಿಷೇಧಿಗಳು ಹತರಾಗುತ್ತಿದ್ದರು. ಅವರಿಗೆ ಬಾಯಾರಿಕೆ, ದಾಹ ಉಂಟಾದರೆ ಅವರ ಹಲ್ಲುಗಳಿರುವ ಜಾಗದಿಂದ ಶುದ್ಧಜಲ ಪುಟಿದು ಒಸರುತ್ತಿತ್ತು. ಅದನ್ನು ಕುಡಿಯುತ್ತಿದ್ದರು. ಹಸಿವಾದಾಗ ಅದೇ ಜಾಗದಲ್ಲಿ ತಿನ್ನಲು ಯೋಗ್ಯವಾದ ಮಾಂಸ ಬೆಳೆಯುತ್ತಿತ್ತು. ಅದನ್ನು ತಿಂದು ಜೀವಿಸುತ್ತಿದ್ದರು. ಹೀಗೆ ದಿನಗಳು, ತಿಂಗಳುಗಳು ಉರುಳುತ್ತಿದ್ದವು. ಸಾವಿರ ತಿಂಗಳುಗಳ ಕಾಲ ಅಲ್ಲಾಹನ ಮಾರ್ಗದಲ್ಲಿ ಸತ್ಯ ನಿಷೇಧಿಗಳೊಂದಿಗೆ ಯುದ್ಧ ಮಾಡುತ್ತಾ ತನ್ನ ಬದುಕನ್ನು ಧನ್ಯಗೊಳಿಸುವಷ್ಟು ಮುಂದೆ ಸಾಗಿದರು. ಸತ್ಯ ನಿಷೇಧಿಗಳು ಶಮೂನುಲ್ ಗಾಝೀ ರ.ಅ ರವರನ್ನು ಎದುರಿಸಲು ಅಶಕ್ತರಾಗಿದ್ದರು. ಸಾವಿರ ತಿಂಗಳಿನಿಂದ ಅಂದರೆ ಎಂಭತ್ತಮೂರು ವರುಷ ನಾಲ್ಕು ತಿಂಗಳು ಅವರನ್ನು ಎದುರಿಸಿ ಪರಾಜಯ ಹೊಂದಿದ್ದರು. ಕೊನೆಗೊಂದು ತೀರ್ಮಾನಕ್ಕೆ ಬಂದರು. ಶಮೂನುಲ್ ಗಾಝೀ ರಹಿಮಹುಲ್ಲಾಹು ರವರ ಸತ್ಯ ನಿಷೇಧಿಯಾದ ಪತ್ನಿಯ ಮೂಲಕ ಅವರನ್ನು ಸಾಯಿಸುವುದು. ಪತ್ನಿಯೊಂದಿಗೆ ಹೇಳಿದರು. ನಿನ್ನ ಪತಿಯನ್ನು ನೀನು ಕೊಂದರೆ ನಿನಗೆ ಅಪಾರ ಸಂಪತ್ತು, ಧನ ನೀಡುವೆವು. ನಿನ್ನ ಅಭಿಪ್ರಾಯವೇನು. ಪತ್ನಿ ಹೇಳಿದಳು : ನನಗೆ ಅವರನ್ನು ಕೊಲ್ಲಲು ಸಾಧ್ಯವಿಲ್ಲ. ಸತ್ಯ ನಿಷೇಧಿಗಳ ಗುಂಪು ಹೇಳಿತು : ನಾವು ನಿನಗೆ ಹಗ್ಗವನ್ನು ತಂದು ಕೊಡುತ್ತೇವೆ. ನೀನು ಮಾಡಬೇಕಾದುದಿಷ್ಟೆ. ನಿನ್ನ ಪತಿ ನಿದ್ರೆಯಲ್ಲಿರುವಾಗ ಅವರ ಕೈ ಕಾಲುಗಳನ್ನು ಕಟ್ಟಬೇಕು. ಬಳಿಕ ನಮಗೆ ವಿಷಯ ಮುಟ್ಟಿಸಿದರಾಯಿತು. ಅವರ ಕಥೆಯನ್ನು ನಾವು ಮುಗಿಸುತ್ತೇವೆ. ಅಂತೆಯೇ ಕಪಟಿ ಪತ್ನಿ ಶಮೂನುಲ್ ಗಾಝೀ ರ.ಅ ನಿದ್ರೆಯಲ್ಲಿದ್ದಂತಹ ಸಂದರ್ಭ ನೋಡಿ ಅವರ ಕೈ ಕಾಲುಗಳನ್ನು ಗಟ್ಟಿಯಾಗಿ ಬಿಗಿದು ಕಟ್ಟಿದಳು. ತಕ್ಷಣ ಶಮೂನುಲ್ ಗಾಝೀ ರ.ಅ ನಿದ್ರೆಯಿಂದ ಎಚ್ಚೆತ್ತರು. ತನ್ನ ಕೈ ಕಾಲುಗಳು ಕಟ್ಟಲ್ಪಟ್ಟದ್ದು ಕಂಡು ಪತ್ನಿಯೊಂದಿಗೆ ಕೇಳಿದರು : ಯಾರು ನನ್ನನ್ನು ಕಟ್ಟಿದ್ದು?. ಪತ್ನಿ ತನ್ನ ಕಾಪಟ್ಯವನ್ನು ಮರೆಮಾಚಿ ಹೇಳಿದಳು : ಅದು ನಾನೇ ಕಟ್ಟಿದ್ದು. ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಕಟ್ಟಿದ್ದು. ತಾವು ಸಾವಿರ ತಿಂಗಳು ಯುದ್ಧ ಮಾಡಿ ಜಯಿಸಿದವರಲ್ಲವೇ? ತಮ್ಮನ್ನು ಎದುರಿಸುವ ತಾಕತ್ತು ಇಲ್ಲಿ ಯಾರಿಗೂ ಇಲ್ಲ. ಈಗ ನಾನು ಬಿಗಿದು ಕಟ್ಟಿದ ಹಗ್ಗವನ್ನು ತಾವು ತುಂಡರಿಸಿರಿ ನೋಡೋಣ. ತಮ್ಮ ಸಾಮರ್ಥ್ಯ ಎಷ್ಟಿದೆಯೆಂದು ನಾನೂ ಲೈವ್ ಆಗಿ ನೋಡೇ ಬಿಡ್ತೀನಿ. ತಕ್ಷಣ ಶಮೂನುಲ್ ಗಾಝಿ ರ.ಅ ತನ್ನ ಶರೀರವನ್ನು ಕೊಡವಿದರು. ಕಟ್ಟಲ್ಪಟ್ಟ ಹಗ್ಗಗಳು ತುಂಡರಿಸಲ್ಪಟ್ಟವು. ಪತ್ನಿ ಮರುದಿನ ಸತ್ಯನಿಷೇಧಿಗಳೊಂದಿಗೆ ನಡೆದ ಸಂಗತಿ ತಿಳಿಸಿದಾಗ ಅವರು ಕಬ್ಬಿಣದ ಚೈನ್ ತಂದು ಕೊಟ್ಟರು. ಇದರಿಂದ ನಿನ್ನ ಪತಿಯನ್ನು ಕಟ್ಟು. ಅಂತೆಯೇ ಎರಡನೇ ಬಾರಿಗೆ ಶಮೂನುಲ್ ಗಾಝೀ ರ.ಅ ಗಾಢ ನಿದ್ರೆಯಲ್ಲಿದ್ದಾಗ ಪತ್ನಿ ಕಬ್ಬಿಣದ ಚೈನ್ ಮೂಲಕ ಅವರನ್ನು ಕಟ್ಟಿದಳು. ಶಮೂನುಲ್ ಗಾಝೀ ರ.ಅ ನಿದ್ರೆಯಿಂದ ಎಚ್ಚೆತ್ತರು. ತನ್ನ ಕೈ ಕಾಲುಗಳನ್ನು ಕಬ್ಬಿಣದ ಸಂಕೋಲೆಯಿಂದ ಬಂಧಿಸಲ್ಪಟ್ಟದ್ದು ಕಂಡು ಪತ್ನಿಯೊಂದಿಗೆ ಕೇಳಿದರು : ಯಾರು ನನ್ನನ್ನು ಬಂಧಿಸಿದ್ದು?. ಪತ್ನಿ ತನ್ನ ಕಾಪಟ್ಯವನ್ನು ಇಲ್ಲೂ ಮರೆಮಾಚಿ ಹೇಳಿದಳು : ಅದು ನಾನೇ ಕಟ್ಟಿದ್ದು. ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಕಟ್ಟಿದ್ದು. ಹಗ್ಗದ ಮೂಲಕ ಕಟ್ಟಿದ್ದನ್ಬು ನೀವು ತುಂಡರಿಸಿದಿರಿ. ಕಬ್ಬಿಣದ ಸಂಕೋಲೆಯಿಂದ ಈವಾಗ ನಾನು ತಮ್ಮನ್ನು ಬಂಧಿಸಿರುವೆ. ಈಗ ತಮ್ಮ ಸಾಮರ್ಥ್ಯ ತೋರಿಸಿರಿ ನೋಡೋಣ. ಶಮೂನುಲ್ ಗಾಝೀ ರ.ಅ ರವರು ತನ್ನ ಶರೀರ ಮತ್ತು ಎರಡು ಕೈಗಳನ್ನು ಶಕ್ತಿಯುತವಾಗಿ ಕೊಡವಿದರು. ಕಬ್ಬಿಣದ ಸಂಕೋಲೆಗಳು ತುಂಡರಿಸಲ್ಪಟ್ಟು ಬಂಧಮುಕ್ತಗೊಂಡರು.
ತನ್ನ ಪತ್ನಿಯ ಕಾಪಟ್ಯವನ್ನು ತಿಳಿದಿದ್ದ ಶಮೂನುಲ್ ಗಾಝೀ ರ.ಅ ರವರು ಮೆಲ್ಲನೆ ಹೇಳಿದರು : ಓ ಹೆಣ್ಣೇ.... ನಾನು ಅಲ್ಲಾಹನ ಇಷ್ಟದಾಸರಾದ ಅವುಲಿಯಾಗಳಲ್ಲಿ ಒಬ್ಬನಾಗಿದ್ದೇನೆ. ನನ್ನನ್ನು ಕೊಲ್ಲಲು ನನ್ನ ತಲೆಯ ಕೂದಲು ಬಿಟ್ಟು ಈ ಭೂಮಿಯಲ್ಲಿರುವ ಯಾವುದೇ ಆಯುಧದಿಂದ ಸಾಧ್ಯವಿಲ್ಲ. ಶಮೂನುಲ್ ಗಾಝೀ ರ.ಅ ರವರು ಕೂದಲನ್ನು ತುಂಬಾ ಉದ್ದಕ್ಕೆ ಬೆಳೆಯಬಿಟ್ಟಿದ್ದರು. ಇದನ್ನು ಶಮೂನುಲ್ ಗಾಝೀ ರ.ಅ ರವರ ಕಾಫಿರಾದ ಪತ್ನಿ ಕೇಳಿದಳು. ಅಂದು ರಾತ್ರಿ ಶಮೂನುಲ್ ಗಾಝೀ ರ.ಅ ಎಂದಿನಂತೆ ಮಲಗಿದರು. ಗಾಢನಿದ್ರೆಯಲ್ಲಿರುವಾಗ ಶಮೂನುಲ್ ಗಾಝೀ ರ.ಅ ರವರ ತಲೆಯ ಎಂಟು ಉದ್ದದ ಕೂದಲುಗಳನ್ನು ಪತ್ನಿ ಕತ್ತರಿಸಿ ತೆಗೆದು ನಾಲ್ಕು ಕೂದಲುಗಳಿಂದ ಶಮೂನುಲ್ ಗಾಝೀ ರ.ಅ ರವರ ಎರಡು ಕೈಗಳನ್ನು ಮತ್ತು ನಾಲ್ಕು ಕೂದಲುಗಳಿಂದ ಎರಡು ಕಾಲುಗಳನ್ನೂ ಕಟ್ಟಿ ಬಂಧಿಸಿದಳು. ಶಮೂನುಲ್ ಗಾಝೀ ರ.ಅ ರವರು ನಿದ್ರೆಯಿಂದ ಎಚ್ಚೆತ್ತರು. ಕೇಳಿದರು ಯಾರು ಕಟ್ಟಿದ್ದು?. ಪತ್ನಿ ಮೊದಲಿನಂತೆಯೇ ತಮ್ಮನ್ನು ಪರೀಕ್ಷಿಸಲು ಕಟ್ಟಿದ್ದು ಎಂಬ ಉತ್ತರ ನೀಡಿದಳು. ಶಮೂನುಲ್ ಗಾಝೀ ರ.ಅ ಎಷ್ಟೇ ಪ್ರಯತ್ನಪಟ್ಟರೂ ಕೈ ಕಾಲುಗಳ ಕಟ್ಟುಗಳನ್ನು ಬಿಡಿಸಲಾಗಲಿಲ್ಲ. ಈ ಸಂದರ್ಭ ನೋಡಿ ಶಮೂನುಲ್ ಗಾಝೀ ರ.ಅ ರವರ ಪತ್ನಿ ಸತ್ಯ ನಿಷೇಧಿಗಳ ಗುಂಪಿಗೆ ವಿಷಯ ಮುಟ್ಟಿಸಿದಳು. ವಿಷಯ ತಿಳಿದದ್ದೇ ತಡ ಸತ್ಯ ನಿಷೇಧಿಗಳಾದ ಶತ್ರುಗಳು ಶಮೂನುಲ್ ಗಾಝೀ ರ.ಅ ರವರ ಮನೆ ಸಮೀಪ ಜಮಾವಣೆಗೊಂಡರು. ಬಳಿಕ ಅವರನ್ನು ಶತ್ರುಗಳು ಒಂದು ಕಟ್ಟಡದೊಳಗಿರುವ ಕೊಲ್ಲುವ ಜಾಗಕ್ಕೆ ಕೊಂಡು ಹೋಗಿ ನೇಣುಕಂಬಕ್ಕೆ ಕಟ್ಟಿ ಎರಡು ಕಿವಿ, ಕಣ್ಣು, ತುಟಿ, ನಾಲಗೆ, ಎರಡು ಕೈ ಕಾಲುಗಳನ್ನು ಇರಿದು ಶರೀರದಿಂದ ಬೇರ್ಪಡಿಸಿದರು. ಶತ್ರುಗಳೆಲ್ಲರೂ ಆ ಕಟ್ಟಡದ ಒಳಗೆ ತುಂಬಾ ಸಂತೋಷದಿಂದಿದ್ದರು. ಸಾವಿರ ತಿಂಗಳುಗಳ ಕಾಲ ಶಮೂನುಲ್ ಗಾಝಿಯನ್ನು ಕೊಲ್ಲಲು ಸಾಧ್ಯವಾಗದೆ ಶತ್ರುಗಳು ಚಡಪಡಿಸಿದ್ದರು. ಈವಾಗ ಕೊಲ್ಲುವ ಸಮಯ ಒದಗಿ ಬಂದ ಆಹ್ಲಾದದಲ್ಲಿದ್ದರು.
ಅಲ್ಲಾಹನು ಶಮೂನುಲ್ ಗಾಝೀ ರ.ಅ ರವರೊಂದಿಗೆ ಇಲ್ ಹಾಮ್ ಮೂಲಕ ಕೇಳಿದನು : ನಾನು ಈವಾಗ ಏನು ಮಾಡಬೇಕೆಂಬುದು ನಿನ್ನ ಇಚ್ಛೆಯಾಗಿದೆ?
ಶಮೂನುಲ್ ಗಾಝೀ ರ.ಅ ಅಸಾಮಾನ್ಯ ಶಕ್ತಿ ಪ್ರಾಪ್ತಿಗಾಗಿ ಅಲ್ಲಾಹನಲ್ಲಿ ಬೇಡಿ ಕೊಂಡರು. ಅಲ್ಲಾಹನು ಅಸಾಮಾನ್ಯ ಶಕ್ತಿ ಸಾಮರ್ಥ್ಯವನ್ನು ನೀಡಿದನು. ಶಮೂನುಲ್ ಗಾಝೀ ರ.ಅ ತನ್ನ ಅಸಾಮಾನ್ಯ ಶಕ್ತಿಯಿಂದ ತನ್ನನ್ನು ಕಟ್ಟಿ ಇಟ್ಟಿದ್ದ ಕಂಬವನ್ನು ಒಂದೇ ಸಮನೆ ಅಲುಗಾಡಿಸಿದರು. ಆ ಕಟ್ಟಡ ಸಂಪೂರ್ಣವಾಗಿ ಶತ್ರುಗಳ ಮೇಲೆ ಕುಸಿಯಿತು.ಶಮೂನುಲ್ ಗಾಝೀ ರ.ಅ ರವರ ಕಪಟಿ ಪತ್ನಿ ಸಹಿತ ಶತ್ರುಗಳೆಲ್ಲರೂ ಕಟ್ಟಡದೊಳಗೆ ಸಿಲುಕಿ ನಾಶ ಹೊಂದಿದರು. ಅಲ್ಲಾಹನ ಅಪಾರ ಮಹಿಮೆಯಿಂದ ಶಮೂನುಲ್ ಗಾಝೀ ರ.ಅ ರವರನ್ನು ಅಲ್ಲಾಹು ಕಾಪಾಡಿದನು. ಅವರ ಶರೀರದಿಂದ ಬೇರ್ಪಡಿಸಲ್ಪಟ್ಟ ಅಂಗಾಂಗಗಳನ್ನು ಅಲ್ಲಾಹನು ಮತ್ತೆ ಜೋಡಣೆಗೊಳಿಸಿದನು.
ಇದು ಶಮೂನುಲ್ ಗಾಝೀ ರ.ಅ ರವರು ಒಂದು ಸಾವಿರ ತಿಂಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ನಡೆಸಿದ ಬಳಿಕ ನಡೆದ ಸಂಭವವಾಗಿದೆ. ನಂತರದ ಕಾಲದಲ್ಲಿ ಮತ್ತೂ ಒಂದು ಸಾವಿರ ತಿಂಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾ ರಾತ್ರಿ ಸುನ್ನತ್ ನಮಾಜು ಹಾಗು ಹಗಲು ಉಪವಾಸದೊಂದಿಗೆ ತನ್ನ ಜೀವನವನ್ನು ಸಂಪೂರ್ಣವಾಗಿ ಧನ್ಯಗೊಳಿಸಿದರು. ಈ ಚರಿತ್ರೆಯನ್ನು ಜಿಬ್ರೀಲ್ ಅ.ಸ ನೆಬಿ ಸ.ಅ ರವರಿಗೆ ವಿವರಿಸಿದ್ದನ್ನು ನೆಬಿ ಸ.ಅ ಸ್ವಹಾಬಿಗಳಿಗೆ ಎಳೆಎಳೆಯಾಗಿ ವಿವರಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ವಹಾಬಿಗಳು ಶಮೂನುಲ್ ಗಾಝೀ ರ.ಅ ರವರಿಗೆ ಅಲ್ಲಾಹನ ಬಳಿ ಲಭಿಸುವ ಪ್ರತಿಫಲವನ್ನು ಮತ್ತು ಅವರಿಗೆ ಅಲ್ಲಾಹನ ಬಳಿ ಎಷ್ಟೊಂದು ಉನ್ನತ ಪದವಿ ಲಭಿಸಬಹುದು ಎಂಬುದನ್ನು ಚಿಂತಿಸಿ ಕಣ್ಣೀರಿಡುತ್ತಾ ಪ್ರವಾದಿ ಸ.ಅ ರವರಲ್ಲಿ ಕೇಳಿದರು. ಶಮೂನುಲ್ ಗಾಝೀ ರ.ಅ ರವರಿಗೆ ಲಭಿಸುವ ಪ್ರತಿಫಲದಷ್ಟು ನಮಗೆ ಲಭಿಸುವುದೇ? ನೆಬಿ ಸ.ಅ ಹೇಳಿದರು : ಅದರ ಬಗ್ಗೆ ನಾನು ತಿಳಿದಿಲ್ಲ. ಈ ಸಮಯದಲ್ಲಿ ಅಲ್ಲಾಹನು ಜಿಬ್ರೀಲ್ ಅ. ಸ ಮುಖಾಂತರ ಲೈಲತುಲ್ ಖದ್ರಿನ ಮಹತ್ವವನ್ನು ಸಾರುವ ಖದ್ರ್ ಸೂರತ್ತನ್ನು ಅವತೀರ್ಣಗೊಳಿಸಿದನು. ಜಿಬ್ರೀಲ್ ಅ.ಸ ಖದ್ರ್ ಸೂರತ್ತನ್ನು ನೆಬಿ ಸ .ಅ ರವರಿಗೆ ಓದಿಕೊಡುತ್ತಾ ಹೇಳಿದರು : ಓ ಪ್ರವಾದಿಯವರೇ : ಅಲ್ಲಾಹು ತಮಗೆ ಮತ್ತು ತಮ್ಮ ಸಮುದಾಯಕ್ಕೆ ಲೈಲತುಲ್ ಖದ್ರ್ ಎಂಬ ಮಹೋನ್ನತ ರಾತ್ರಿಯನ್ನು ನೀಡಿದ್ದಾನೆ. ಆ ಒಂದು ರಾತ್ರಿ ಸಾವಿರ ತಿಂಗಳುಗಳಿಗಿಂತ ಉತ್ತಮವಾದುದಾಗಿದೆ. ಕೆಲವು ವಿದ್ವಾಂಸರು ಹೇಳುತ್ತಾರೆ : ಲೈಲತುಲ್ ಖದ್ರಿನ ರಾತ್ರಿ ಎರಡು ರಕಾತ್ ನಮಾಜು ನಿರ್ವಹಿಸುವುದು ಇಸ್ರಾಯಿಲ್ ಸಮುದಾಯದ ಕಾಲದಲ್ಲಿ ಒಂದು ಸಾವಿರ ತಿಂಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದುದಕ್ಕಿಂತಲೂ ಶ್ರೇಷ್ಠ ಪ್ರತಿಫಲವಾಗಿದೆ.
>>>>>>>>>>>>>>>>>>>>>>>>
ಲೈಲತುಲ್ ಖದ್ರಿನ ರಾತ್ರಿ ತಿಳಿಯದಾಗಲು ಕಾರಣವೇನು?
ಲೈಲತುಲ್ ಖದ್ರ್ ನ ರಾತ್ರಿಯ ವಿಷಯದಲ್ಲಿ ಹಲವು ಅಭಿಪ್ರಾಯಗಳಿವೆ. ಇವುಗಳಲ್ಲಿ ರಮಳಾನಿನ ಅಂತಿಮ ಹತ್ತರ ಒಂಟಿಗಳಲ್ಲಿಯಾಗಿದೆ ಎಂಬುದು ಪ್ರಬಲ ಅಭಿಪ್ರಾಯವಾಗಿದೆ. ಲೈಲತುಲ್ ಖದ್ರ್ ನ ರಾತ್ರಿ ನಿಖರವಾಗಿ ಹೇಳಲು ಸಾಧ್ಯವಾಗದಿರುವುದು ಎರಡು ವ್ಯಕ್ತಿಗಳ ಜಗಳದಿಂದಾಗಿದೆ.
ಉಬಾದತುಬ್ನುಸ್ಸಾಮಿತ್ ರ.ಅ ನಿವೇದನೆ.
""ಒಮ್ಮೆ ಪ್ರವಾದಿ ರಸೂಲುಲ್ಲಾಹಿ ಸ.ಅ ಲೈಲತುಲ್ ಖದ್ರಿನ ರಾತ್ರಿಯ ಕುರಿತು ನಮಗೆ ತಿಳಿಸಲು ಹೊರಟು ಬರುವಾಗ ಎರಡು ವ್ಯಕ್ತಿಗಳು ಪರಸ್ಪರ ತರ್ಕದಲ್ಲಿ ಏರ್ಪಟ್ಟಿದ್ದರು.
ನೆಬಿ ಸ.ಅ ಹೇಳುತ್ತಾರೆ : ನಾನು ಲೈಲತುಲ್ ಖದ್ರ್ ಯಾವಾಗ ಎಂದು ನಿಮಗೆ ತಿಳಿಸಲು ಹೊರಟು ಬರುವಾಗ ಇಂತಿಂತಹ ಎರಡು ವ್ಯಕ್ತಿಗಳು ಪರಸ್ಪರ ಜಗಳ ತರ್ಕದಲ್ಲಿದ್ದರು. ಈ ಕಾರಣದಿಂದ ಲೈಲತುಲ್ ಖದ್ರ್ ಯಾವಾಗ ಎಂದು ನನಗೆ ಮರೆತು ಹೋಯಿತು. ಅದು ನಿಮ್ಮ ಒಳಿತಿಗಾಗಿಯೇ ಆಗಿರಬಹುದು. ಆದುದರಿಂದ ನೀವು ರಮಳಾನಿನ 25, 27, 29 ರಲ್ಲಿ ನಿರೀಕ್ಷಿಸಿರಿ"".
✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
ಸಹಕಾರ : ವಿ ಎ ಮುಹಮ್ಮದ್ ಸಖಾಫಿ ವಳವೂರು
ಪ್ರೋತ್ಸಾಹ : ಗಫೂರ್ ಬಾಯಾರ್
No comments:
Post a Comment