Sunday, 16 October 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ -07

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

----------------------------------
               ಸಂಚಿಕೆ -07

                 ದುಃಖ ವರ್ಷ

ನೆಬಿ ಸ.ಅ ರವರಿಗೆ ಕುರೈಶಿಗಳಲ್ಲಿ ರಕ್ಷಣೆ ನೀಡುತ್ತಿದ್ದುದು ಅಬೂತಾಲಿಬ್ ಆಗಿದ್ದರು.ನೆಬಿ ಸ.ಅ ಬಹಿರಂಗವಾಗಿ ಇಸ್ಲಾಂ ಧರ್ಮದ ಪ್ರಚಾರಕ್ಕೆ ಇಳಿದಾಗ ಕುರೈಶಿಗಳು ಅಬೂತಾಲಿಬರನ್ನು ಸಮೀಪಿಸಿ ತಾಕೀತು ನೀಡಿದರು.ತಮ್ಮ ಧರ್ಮವನ್ನು ಆಕ್ಷೇಪಿಸುವುದು ತಡೆಯಬೇಕು ಅಥವಾ ನೆಬಿ ಸ.ಅ ರವರನ್ನು ಕುರೈಶಿಗಳ ಕೈಗೆ ಒಪ್ಪಿಸಬೇಕು ಎಂದು ಅವರು ಅಬೂತಾಲಿಬರೊಂದಿಗೆ ಆವಶ್ಯಪಟ್ಟರು.ಅಬೂತಾಲಿಬ್ ಅವರನ್ನು ತಂತ್ರಪೂರ್ವಕ ಮಧುರ ಮಾತುಗಳಿಂದ ಸಮಾಧಾನಿಸಿ ಮರಳಿ ಕಳುಹಿಸಿದರು.ಕೆಲವು ದಿನಗಳ ಬಳಿಕ ಮತ್ತೆ ಕುರೈಶಿಗಳು ಅಬೂತಾಲಿಬರ ಬಳಿ ಬಂದು ಹೇಳಿದರು.ನೀವು ಅವನನ್ನು ತಡೆಯಬೇಕು.ಇಸ್ಲಾಂ ಧರ್ಮದ ಪ್ರಬೋಧನೆಯಿಂದ ಹಿಂದೆ ಸರಿಯುವಂತೆ ಮಾಡಬೇಕು.ಇಲ್ಲದಿದ್ದರೆ ನಿಮ್ಮನ್ನು ಮತ್ತು ಅವನನ್ನು ಬಹಿಷ್ಕರಿಸಬೇಕಾಗಿ ಬರಬಹುದು ಎಂದು ಅಂತಿಮ ತೀರ್ಪು ಪ್ರಖ್ಯಾಪಿಸಿದರು.ಕುರೈಶಿಗಳನ್ನು ಬಿಟ್ಟು ನಿಲ್ಲುವುದು ಅಬೂತಾಲಿಬರಿಗೆ ತುಂಬಾ ಕಷ್ಟಕರವಾಗಿತ್ತು.ಅವರು ನೆಬಿ ಸ.ಅ ರವರನ್ನು ಹತ್ತಿರ ಕರೆದು ವಾಸ್ತವ ಸಂಗತಿಯನ್ನು ವಿವರಿಸಿದರು.ನನ್ನೊಂದಿಗೆ ಕಿಂಚಿತ್ತಾದರೂ ಅನುಕಂಪ ತೋರಿಸಬೇಕು.ನನಗೆ ಕಷ್ಟಸಾಧ್ಯವಾದ ಕೆಲಸಕ್ಕೆ ನಿರ್ಬಂಧಿಸಬಾರದು.ಕುರೈಶಿಗಳನ್ನು ಬಿಟ್ಟು ನಿಲ್ಲುವುದು ನನಗೆ ಸಾಧ್ಯವಿಲ್ಲ.ಆದುದರಿಂದ ನನ್ನ ಮೇಲೆ ಕರುಣೆ ತೋರಿಸಬೇಕು.ಇಸ್ಲಾಂ ಧರ್ಮ ಪ್ರಚಾರವನ್ನು ಸ್ಥಗಿತಗೊಳಿಸಬೇಕು ಎಂದು ಅಬೂತಾಲಿಬ್ ಹೇಳಿದಾಗ ನೆಬಿ ಸ.ಅ ಹೇಳಿದರು.ಅಲ್ಲಾಹನಾಣೆ ಸತ್ಯ..ನನ್ನ ಬಲ ಕೈಯಲ್ಲಿ ಸೂರ್ಯನನ್ನೂ ಎಡ ಕೈಯಲ್ಲಿ ಚಂದ್ರನನ್ನೂ ಇಟ್ಟುಕೊಟ್ಟರೂ ನನ್ನ ದೌತ್ಯದಿಂದ ನಾನು ಹಿಂದೆ ಸರಿಯಲಾರೆ.ಅಲ್ಲಾಹು ನನ್ನ ಈ ಕಾರ್ಯಕ್ಕೆ ಖಂಡಿತ ಜಯ ನೀಡುತ್ತಾನೆ.ಅಥವಾ ಆ ಮಾರ್ಗದಲ್ಲಿ ನಾನು ಮರಣ ಹೊಂದುವೆ ಎನ್ನುತ್ತಾ ನೆಬಿ ಸ.ಅ ಅಳುತ್ತಾ ಮನೆಯಿಂದ ಹೊರಹೋದರು.ತನ್ನ ಸಹೋದರನ ಮಗನಾದ ನೆಬಿ ಸ.ಅ ರವರೊಂದಿಗೆ ಮನಸ್ಸಿನಂತರಾಳದಿಂದ ಬಂದ ಅನುಕಂಪದಿಂದ ಅಬೂತಾಲಿಬ್ ನೆಬಿ ಸ.ಅ ರವರನ್ನು ಕರೆದು ಹೇಳಿದರು.ನಿನಗೆ ಇಷ್ಟವಿರುವ ಕಾರ್ಯವನ್ನು ಜನರ ಮುಂದೆ ಹೇಳು.ಅಲ್ಲಾಹನಾಣೆ ಸತ್ಯ..ನಿನ್ನನ್ನು ನಾನು ಕುರೈಶೀಗಳಿಗೆ ವಹಿಸಿ ಕೊಡಲಾರೆನು.
          ಹಜ್ಜಿನ ಸಮಯವಾಗಿತ್ತು.ಹಜ್ ನಿರ್ವಹಿಸಲು ನಾನಾ ದಿಕ್ಕಿನಿಂದ ಬರುತ್ತಿದ್ದವರೊಂದಿಗೆ ಮುಶ್ರಿಕುಗಳು ನೆಬಿ ಸ.ಅ ರವರ ಕುರಿತು ಮುನ್ನೆಚ್ಚರಿಕೆ ನೀಡತೊಡಗಿದರು.ಇದು ಅರೇಬಿಯದ ನಾನಾ ದಿಕ್ಕುಗಳಿಗೂ ನೆಬಿ ಸ.ಅ ರವರ ಕುರಿತಿರುವ ಇಸ್ಲಾಂ ಧರ್ಮದ ಪ್ರಚಾರಕ್ಕೆ ಇನ್ನಷ್ಟು ನಿಮಿತ್ತವಾಯಿತೇ ಹೊರತು ಮುಶ್ರಿಕುಗಳ ಕುತಂತ್ರ ಫಲಿಸದೇ ಹೋಯಿತು.ಆಗ ಶತ್ರುಗಳ ಆಕ್ರಮಣ ಇನ್ನಷ್ಟು ತೀವ್ರವಾಯಿತು.ಆದುದರಿಂದ ನೆಬಿ ಸ.ಅ ಸ್ವಹಾಬಿಗಳಿಗೆ ವಲಸೆ ( ಹಿಜ್ರಾ ) ಹೋಗಲು ಅನುಮತಿ ನೀಡಿದರು.
        ನುಬುವ್ವತಿನ ಐದನೇ ವರ್ಷ ಹತ್ತು ಪುರುಷರು ಮತ್ತು ನಾಲ್ಕು ಸ್ತ್ರೀಯರು ಹಬಶ ( ಇಥಿಯೋಪಿಯ ) ಕ್ಕೆ  ಹಿಜ್ರಃ ಹೋದರು.ಇಥಿಯೋಪಿಯದಲ್ಲಿ ನಜ್ಜಾಶೀ ರಾಜನ ರಕ್ಷಣೆಯಲ್ಲಿ ಭಯಮುಕ್ತರಾಗಿ ಜೀವಿಸಿದರು.ಮಕ್ಕಾ ನಿವಾಸಿಗಳೆಲ್ಲರೂ ಇದೀಗ ಮುಸ್ಲಿಮರಾಗಿದ್ದಾರೆ ಎಂಬ ಗಾಳಿ ಸುದ್ಧಿ ತಿಳಿದು ಇವರು ಮತ್ತೆ ಮಕ್ಕಾಕ್ಕೆ ಮರಳಿದರು.ಇದು ಗಾಳಿ ಸುದ್ದಿಯಾಗಿತ್ತು ಎಂದು ಮಕ್ಕಾಕ್ಕೆ ಮರಳಿದ ಬಳಿಕವೇ ತಿಳಿಯಲು ಸಾಧ್ಯವಾಯಿತು.ಮಾತ್ರವಲ್ಲ ಶತ್ರುಗಳ ಉಪಟಳ,ಹಿಂಸೆ ಮೊದಲಿಗಿಂತಲೂ ಈಗ ಇಮ್ಮಡಿಯಾಗಿತ್ತು.ನೆಬಿ ಸ.ಅ ರವರ ಅನುಮತಿಯೊಂದಿಗೆ 83 ಪುರುಷರು ಮತ್ತು 18 ಸ್ತ್ರೀಯರು ಮತ್ತೆ ಹಬಶಕ್ಕೆ ಪಲಾಯನ ಮಾಡಿದರು.
       ಕುರೈಶಿಗಳ ಕುತಂತ್ರಗಳು ಫಲಿಸದೇ ಬಂದಾಗ ನೆಬಿ ಸ.ಅ ರವರನ್ನು ಬಿಟ್ಟು ಕೊಡುವ ವರೆಗೆ ಬನೂ ಹಾಶಿಂ, ಬನೂ ಮುತ್ತಲಿಬ್ ಕುಟುಂಬವನ್ನು ಬಹಿಷ್ಕರಿಸಲು ತೀರ್ಮಾನಿಸಿದರು.ಬಹಿಷ್ಕಾರ ಪತ್ರವನ್ನು ಕಾಬಾ ದ ಬಾಗಿಲಿನಲ್ಲಿ ನೇತು ಹಾಕಿದರು.ಇದರಿಂದ ಮುಸ್ಲಿಮರು ಅಬೂತಾಲಿಬ್ ಗುಡಾರದಲ್ಲಿ ತುಂಬಾ ಯಾತನಾಮಯ ಜೀವನವನ್ನು ಅನುಭವಿಸಿದರು.ಬಹಿಷ್ಕಾರವಿದ್ದುದರಿಂದ ಒಂದು ತುತ್ತು ಆಹಾರಕ್ಕಾಗಿಯೂ ಪರದಾಡಿದರು.ಹಸಿರೆಲೆಗಳನ್ನು ತಿಂದು ಬದುಕುವ ತೀರಾ ಶೋಚನೀಯ ಅವಸ್ಥೆಯೂ ಬಂದಿತ್ತು.ಮೂರು ವರ್ಷಗಳ ಕಾಲ ಅವರು ಅಲ್ಲಿ ಕಷ್ಟದಾಯಕವಾದ ಜೀವನ ನಡೆಸಿದರು.ಕೊನೆಗೆ ಕುರೈಶೀ ಪ್ರಮುಖರಲ್ಲಿ ಕೆಲವರಿಗೆ ಮುಸ್ಲಿಮರೊಂದಿಗೆ ಅಲ್ಪ ಸಡಿಲ ಮನೋಭಾವ ಬೆಳೆಯಿತು.ಅವರು ಕಾಬಾದಲ್ಲಿ ನೇತು ಹಾಕಿದ್ದ ಬಹಿಷ್ಕಾರದ ನೋಟೀಸ್ ತೆಗೆದು ಹಾಕಿದರು.ಸತ್ಯದಲ್ಲಿ ಅಲ್ಲಾಹನ ನಾಮ ಹೊರತು ಉಳಿದ ಭಾಗಗಳೆಲ್ಲವೂ ಗೆದ್ದಲು ಹಿಡಿದು ನಾಶವಾಗಿತ್ತು.
        ನೆಬಿ ಸ.ಅ ಪ್ರಚಾರ ಕಾರ್ಯ ಮುಂದುವರಿಸಿದರು.ನಝ್ರಾನ್ ನಿಂದ ಆಗಮಿಸಿದ ಒಂದು ಕ್ರೈಸ್ತ ಸಂಘ ನೆಬಿ ಸ.ಅ ರವರನ್ನು ಭೇಟಿಯಾಗಿ ಇಸ್ಲಾಂ ಧರ್ಮ ಸ್ವೀಕರಿಸಿದರು.ನುಬುವ್ವತಿನ ಹತ್ತನೇ ವರ್ಷ ಮೊದಲು ಅಬೂತಾಲಿಬ್ ಬಳಿಕ ಪ್ರಿಯ ಪತ್ನಿ ಖದೀಜ ಬೀವಿ ರ.ಅ ವಫಾತಾದರು.ತನಗೆ ಹೆಚ್ಚು ಇಷ್ಟವಿರುವವರ ಅಗಲುವಿಕೆಯಲ್ಲಿ ತೀವ್ರ ದುಃಖಿತರಾದರು.ಅಬೂತಾಲಿಬ್ ಮರಣ ಹೊಂದಿದ ಬಳಿಕ ಮುಶ್ರಿಕರ ಉಪಟಳ ಹೆಚ್ಚಾಯಿತು.ಆಗ ನೆಬಿ ಸ.ಅ ತ್ವಾಯಿಫಿನ ಸಖೀಫ್ ಗೋತ್ರದವರ ಬಳಿ ಹೋದರು.ಅವರು ಅಭಯ ನೀಡುವರು ಎಂದು ನಿರೀಕ್ಷಿಸಿದರೂ ಅದು ಉಂಟಾಗಲಿಲ್ಲ.ಬದಲು ಅವರು ಪುಂಡು ಪೋಕರಿ ಮಕ್ಕಳನ್ನೂ ಬಚ್ಚಾಲಿ ಯುವಕರನ್ನೂ ನೆಬಿ ಸ.ಅ ರವರ ನೇರ ಛೂ ಬಿಟ್ಟರು.ಅವರ ಆಕ್ರಮಣದಿಂದ ನೆಬಿ ಸ.ಅ ರವರಿಗೆ ಗಾಯವಾಯಿತು.ಆಗ ಜಿಬ್ರೀಲ್ ಅ.ಸ ನೆಬಿ ಸ.ಅ ರವರ ಮುಂದೆ ಪ್ರತ್ಯಕ್ಷರಾಗಿ ಅವರನ್ನು ಶಿಕ್ಷಿಸಲು ಅನುಮತಿ ಕೇಳಿದರು.ನೆಬಿ ಸ.ಅ ಹೇಳಿದರು.ಓ ಜಿಬ್ರೀಲ್.ಅವರು ಅಜ್ಞಾನಿಗಳಾಗಿದ್ದಾರೆ.ಅವರನ್ನು ಶಿಕ್ಷಿಸುವುದು ನನಗೆ ಇಷ್ಟವಿಲ್ಲ.ಅವರಲ್ಲಿ ಯಾವನಾದರೊಬ್ಬ ಇಸ್ಲಾಂ ಧರ್ಮ ಸ್ವೀಕರಿಸಿದರೆ ಅದುವಾಗಿದೆ ಒಳಿತು.ಬಳಿಕ ದುವಾ ಮಾಡಿದರು.ಅಲ್ಲಾಹುವೇ, ನನ್ನ ಜನತೆಗೆ ನೀನು ಸನ್ಮಾರ್ಗದ ಹಾದಿ ತೋರಿಸು.ಅವರು ತಿಳುವಳಿಕೆ ಇಲ್ಲದವರಾಗಿದ್ದಾರೆ.
ನೆಬಿ ಸ.ಅ ತೀವ್ರ ನಿರಾಶೆಯಿಂದ ತ್ವಾಯಿಫ್ ನಿಂದ ಹಿಂದಿರುಗಿದರು.ದಾರಿ ಮಧ್ಯೆ ಅದ್ದಾಸ್ ಎಂಬವರು ನೆಬಿ ಸ.ಅ ರವರನ್ನು ಸಮೀಪಿಸಿದರು.ಕ್ರೈಸ್ತನಾದ ಅದ್ದಾಸ್ ಎಂಬ ನೀನವಾ ನಿವಾಸಿ ನೆಬಿ ಸ.ಅ ರವರನ್ನು ಅರಿತು ಇಸ್ಲಾಂ ಧರ್ಮ ಸ್ವೀಕರಿಸಿದರು.
ನಖ್ಲ ಎಂಬ ಸ್ಥಳಕ್ಕೆ ಮುಟ್ಟಿದಾಗ ಜಿನ್ನ್ ವರ್ಗದ ಒಂದು ಗುಂಪು ನೆಬಿ ಸ.ಅ ರವರಿಂದ ಕುರಾನ್ ಕೇಳಿಸಿಕೊಂಡು ಇಸ್ಲಾಂ ಧರ್ಮ ಸ್ವೀಕರಿಸಿದರು.ಬಳಿಕ ಆ ಜಿನ್‍ನ್ ವರ್ಗವು ಅವರ ಜನತೆಗೆ ಇಸ್ಲಾಂ ಧರ್ಮದ ಪ್ರಬೋಧನೆ ತಲುಪಿಸಲು ಹೊರಟುಹೋದರು.

ಮುಂದುವರಿಯುವುದು.....

® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...