ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ
----------------------------------
ಸಂಚಿಕೆ -02
ಹಲೀಮ ಬೀವಿ ರ.ಅ ರವರ ಪರಿಪಾಲನೆಯಲ್ಲಿ ಬೆಳೆಯುತ್ತಿದ್ದ ಮಗುವಿನ ( ನೆಬಿ ಸ.ಅ ರವರ ) ಹ್ರದಯ ಶಸ್ತ್ರಕ್ರಿಯೆ ನಡೆಸಿ ಶೈತಾನನ ಅಂಶವನ್ನು ಹೊರತೆಗೆದ ಘಟನೆ ನಡೆಯಿತು.
ಮಗುವಾಗಿದ್ದ ನೆಬಿ ಸ.ಅ ಮತ್ತು ಹಲೀಮ ಬೀವಿ ರ.ಅ ರವರ ಮಗು ಇಮ್ರಾನ್ ಮನೆ ಹತ್ತಿರದ ಬಯಲಲ್ಲಿ ಆಡು ಮೇಯಿಸುತ್ತಿದ್ದಾಗ ಬಿಳಿ ವಸ್ತ್ರಧಾರಿಗಳಾದ ಎರಡು ಮಲಕುಗಳು ಬಂದು ಮಗುವನ್ನು ಹಿಡಿದು ಬಟಾ ಬಯಲಲ್ಲಿ ಮಲಗಿಸಿ ಎದೆಯನ್ನು ಸೀಳಿ ಹ್ರದಯವನ್ನು ಶಸ್ತ್ರಕ್ರಿಯೆ ನಡೆಸಿ ಶೈತಾನನ ಅಂಶವನ್ನು ಹೊರತೆಗೆದು ಹ್ರದಯವನ್ನು ಶುಚಿಗೊಳಿಸಿದರು.ವಿವರ ತಿಳಿದು ಹಲೀಮ ಬೀವಿ ರ.ಅ ಮತ್ತು ಅವರ ಪತಿ ಓಡಿ ಬಂದರು.ಗಾಬರಿಗೊಂಡು ಮುಖದ ವರ್ಣ ಬದಲಾಗಿದ್ದ ಮಗುವಿನೊಂದಿಗೆ ನಡೆದ ಸಂಭವದ ಕುರಿತು ಕೇಳಿದರು.ಮಗು ಸಂಭವವನ್ನು ಸವಿಸ್ತಾರವಾಗಿ ವಿವರಿಸಿತು.ನಡೆದ ಘಟನೆ ಪೈಶಾಚಿಕ ತೊಂದರೆಯಾಗಿರಬಹುದೆಂಬ ಊಹೆಯಿಂದ ಹಲೀಮ ಬೀವಿ (ರ.ಅ) ಮಗುವನ್ನು ತಾಯಿ ಆಮಿನ ಬೀವಿ ರ.ಅ ರವರ ಬಳಿ ಕರೆದುಕೊಂಡು ಹೋಗಿ ನಡೆದ ಸಂಗತಿಯನ್ನು ವಿವರಿಸಿದಾಗ ತಾಯಿ ಆಮಿನ ಬೀವಿ ರ.ಅ ಹೇಳಿದರು.ಏನು ಹೇಳುತ್ತಿದ್ದೀರಿ ಹಲೀಮ..ನನ್ನ ಮಗು ಸಾಮಾನ್ಯ ಮಗುವಲ್ಲ.ನನ್ನ ಮಗುವಿಗೆ ಪಿಶಾಚಿಯ ಉಪಟಳ ಸಂಭವಿಸಲಿಕ್ಕಿಲ್ಲ.ನಾನು ಗರ್ಭಿಣಿಯಾಗಿದ್ದಾಗ ಹಾಗು ಪ್ರಸವದ ಸಮಯದಲ್ಲಿ ಹಲವಾರು ಅದ್ಭುತ ಘಟನೆಗಳನ್ನು ನಡೆದಿದೆ.ಆದುದರಿಂದ ನೀವು ಭಯಪಡದಿರಿ..ನೀವು ನಿಶ್ಚಿಂತೆಯಿಂದ ಮರಳಿಹೋಗಿ...ಇದನ್ನು ಆಲಿಸಿದ ಹಲೀಮ ಬೀವಿ ರ.ಅ ಮಗುವನ್ನು ತಾಯಿ ಆಮಿನ ಬೀವಿ ರ.ಅ ರವರಿಗೆ ಒಪ್ಪಿಸಿ ಮರಳಿ ಹೋದರು.ಆಗ ಮಗುವಿಗೆ ನಾಲ್ಕು ವರ್ಷ ಪ್ರಾಯವಾಗಿತ್ತು..(ನಂತರದ ಕಾಲದಲ್ಲಿ ಹಲೀಮ ಬೀವಿ ರ.ಅ ಮತ್ತು ಅವರ ಪತಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರು.)
ಮಗು ಆಮಿನ ಬೀವಿ ರ.ಅ ರವರ ಲಾಲನೆ ಪೋಷಣೆಯಲ್ಲಿ ಬೆಳೆಯತೊಡಗಿತು.ಮಗುವಿಗೆ ಆರು ವರ್ಷ ಪ್ರಾಯವಾದಾಗ ಒಂದು ದಿನ ತಂದೆ ಅಬ್ದುಲ್ಲಾಹ್ (ರ.ಅ) ರವರ ಖಬರ್ ಸಂದರ್ಶನಕ್ಕೆಂದು ಆಮಿನ ಬೀವಿ ರ.ಅ ಪರಿಚಾರಕಿ ಉಮ್ಮುಐಮನ್ ರ.ಅ ರವರೊಂದಿಗೆ ಮಗುವನ್ನು ಮದೀನಕ್ಕೆ ಕರೆದು ಕೊಂಡು ಹೋದರು.ಮದೀನದಲ್ಲಿ ಖಬರ್ ಸಂದರ್ಶಿಸಿ ಮರಳಿ ಬರುವಾಗ ಮಕ್ಕಾ ಮದೀನದ ನಡುವೆ ಇರುವ ಅಬವಾಹ್ ಎಂಬ ಸ್ಥಳದಲ್ಲಿ ತಾಯಿ ಆಮಿನ ಬೀವಿ ರ.ಅ ವಫಾತಾದರು.ಉಮ್ಮುಐಮನ್ ಮಗುವನ್ನು ಕರೆದುಕೊಂಡು ಬಂದು ಅಬ್ದುಲ್ ಮುತ್ತಲಿಬರ ಸುಪರ್ದಿಗೆ ಮುಟ್ಟಿಸಿದರು.ಬಳಿಕ ಮಗು ಅಜ್ಜನ ಲಾಲನೆ ಪೋಷಣೆಯಲ್ಲಿ ಬೆಳೆಯುತ್ತಿದ್ದಂತೆ ಅಬ್ದುಲ್ ಮುತ್ತಲಿಬ್ ಕೂಡಾ ಇಹಲೋಕ ತ್ಯಜಿಸಿದರು.ಆಗ ಮಗುವಿಗೆ ಎಂಟು ವರ್ಷ ಪ್ರಾಯವಾಗಿತ್ತು.ಬಳಿಕ ಪಿತ್ರ ಸಹೋದರನಾದ ಅಬೂತಾಲಿಬ್ ಮಗುವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು.ಅವರು ತನ್ನ ಮಕ್ಕಳಿಗಿಂತ ಹೆಚ್ಚು ಪ್ರೀತಿ,ಶ್ರದ್ಧೆಯಿಂದ ನೆಬಿ ಸ.ಅ ರವರನ್ನು ಬೆಳೆಸಿದರು.
ನೆಬಿ ಸ.ಅ ರವರಿಗೆ ಹನ್ನೆರಡು ವರ್ಷವಾದಾಗ ಅಬೂತಾಲಿಬ್ ಸಿರಿಯಾ ದೇಶಕ್ಕೆ ವ್ಯಾಪಾರಕ್ಕೆ ಹೊರಟರು.ಗಾಢ ಪ್ರೀತಿಯಿಂದ ನೆಬಿ ಸ.ಅ ರವರನ್ನು ಬೇರ್ಪಟ್ಟು ಜೀವಿಸುವುದು ಅಬೂತಾಲಿಬರಿಗೆ ಕಷ್ಟಸಾಧ್ಯವಾದ ಕಾರಣ ತನ್ನ ಜತೆ ಸಿರಿಯಾಕ್ಕೆ ಕರೆದುಕೊಂಡು ಹೋದರು.ಅವರು ಬುಸ್ರಾ ಪಟ್ಟಣಕ್ಕೆ ತಲುಪಿದರು.ಅಲ್ಲಿ ಬಹೀರ ಎಂಬ ಕ್ರೈಸ್ತ ಪುರೋಹಿತ ತನ್ನ ಆರಾಧನಾಲಯದಲ್ಲಿ ಧ್ಯಾನ ನಿರತನಾಗಿದ್ದನು.ವ್ಯಾಪಾರ ಸಂಘದಲ್ಲಿದ್ದ ಓರ್ವ ಮಗುವಿಗೆ ಮಾತ್ರ ಆಕಾಶದಿಂದ ಮೋಡ ನೆರಳು ನೀಡುತ್ತಿದ್ದುದ್ದನ್ನು ಗಮನಿಸಿದ ಬಹೀರ ಆ ಮಗುವಿನ ಕುರಿತು ತಿಳಿಯಲಿಕ್ಕೋಸ್ಕರ ಭೋಜನಕೂಟವನ್ನು ಏರ್ಪಡಿಸಿ ಅವರಿಗೆ ಆಹ್ವಾನ ನೀಡಿದನು.ನೆಬಿ ಸ.ಅ ಚಿಕ್ಕ ಪ್ರಾಯದ ಬಾಲಕನಾಗಿದ್ದ ಕಾರಣ ಬಹೀರ ಏರ್ಪಡಿಸಿದ ಭೋಜನಕೂಟಕ್ಕೆ ವ್ಯಾಪಾರ ಸಂಘ ನೆಬಿ ಸ.ಅ ರವರನ್ನು ಕರೆದುಕೊಂಡು ಹೋಗಲಿಲ್ಲ.ಒಂದು ಕಡೆ ನೆಬಿ ಸ.ಅ ರವರನ್ನು ಕುಳ್ಳಿರಿಸಿ ಅವರು ಭೋಜನಕೂಟಕ್ಕೆ ಹೋದರು.ವ್ಯಾಪಾರ ಸಂಘದೊಂದಿಗೆ ಬಾಲಕನನ್ನು ಕಾಣದಾದಾಗ ಬಹೀರ ಅವರೊಂದಿಗೆ ವಿಚಾರಿಸಿ ಆ ಬಾಲಕನನ್ನೂ ಕರೆದುಕೊಂಡು ಬರುವಂತೆ ತಿಳಿಸಿದನು.ಬಹೀರನ ಇಚ್ಛೆಯಂತೆ ಬಾಲಕನಾದ ನೆಬಿ ಸ.ಅ ರವರನ್ನೂ ಭೋಜನಕೂಟಕ್ಕೆ ಅಬೂತಾಲಿಬ್ ಕರೆದು ಕೊಂಡು ಬಂದರು.ಆಹಾರ ಸೇವನೆಯ ಬಳಿಕ ಬಹೀರ ಬಾಲಕನೊಂದಿಗೆ ಮಾತನಾಡಿದನು.ಬಾಲಕನಿಂದ ಸಂಪೂರ್ಣ ಸ್ಥಿತಿ ವಿವರ,ಮಾಹಿತಿಗಳನ್ನು ಅರಿತ ಬಹೀರ ಈ ಬಾಲಕ ಎಲ್ಲರೂ ನಿರೀಕ್ಷಿಸುತ್ತಿರುವ ಅಂತ್ಯ ಪ್ರವಾದಿಯಾಗಿದ್ದಾರೆ ಎಂದು ತಿಳಿಯಿತು.ಬಾಲಕನನ್ನು ಜೂದರಿಂದ ( ಯಹೂದಿಗಳಿಂದ ) ಜಾಗ್ರತೆ ವಹಿಸಲು ಅಬೂತಾಲಿಬರಿಗೆ ಬಹೀರ ನಿರ್ದೇಶಿಸಿದನು.ಅಬೂತಾಲಿಬ್ ಆ ವರ್ಷ ಸಿರಿಯಾದಲ್ಲಿ ವ್ಯಾಪಾರವನ್ನು ಬೇಗನೇ ಮುಗಿಸಿ ನೆಬಿ ಸ.ಅ ರೊಂದಿಗೆ ಮಕ್ಕಾಕ್ಕೆ ಮರಳಿದರು.
ವಿವಾಹ.....ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ...
® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
+918105745760
No comments:
Post a Comment