ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ
----------------------------------
ಸಂಚಿಕೆ -04
ನುಬುವ್ವತ್ ಮತ್ತು ರಿಸಾಲತ್..
ನೆಬಿ ಸ.ಅ ರವರಿಗೆ 40 ವರ್ಷ ಪೂರ್ತಿಯಾಯಿತು.ಪ್ರವಾದಿ ಸ.ಅ ನೆಬಿಯಾಗಿಯೂ ರಸೂಲಾಗಿಯೂ ಆಯ್ಕೆಗೊಳ್ಳಲು ಸಮಯ ಸನಿಹವಾಯಿತು.ನೆಬಿ ಸ.ಅ ರವರಿಗೆ ಮಕ್ಕಾದಲ್ಲಿರುವ ಕಲ್ಲುಗಳು ಮರಗಳು ಅಸ್ಸಲಾಮು ಅಲೈಕ ಯಾ ರಸೂಲಲ್ಲಾಹ್ ಎಂದು ಸಲಾಂ ಹೇಳಲು ಪ್ರಾರಂಭಿಸಿದವು.ನೆಬಿ ಸ.ಅ ರವರಿಗೆ ಕಾಣಲ್ಪಡುವ ಕನಸುಗಳು ಸತ್ಯವಾಗಿ ಗೋಚರಿಸ್ಪಡುತ್ತಿತ್ತು.ಇವುಗಳೆಲ್ಲವೂ ನೆಬಿ ಸ.ಅ ರವರಿಗೆ ಅಲ್ಲಾಹನ ಭಾಗದಿಂದ ದಿವ್ಯ ಸಂದೇಶ ಸಿಗಲಿರುವ ಸ್ಪಷ್ಟ ಮುನ್ಸೂಚನೆಯ ಪ್ರಾರಂಭ ಹಂತವಾಗಿತ್ತು.ಆರು ತಿಂಗಳುಗಳ ಕಾಲ ಇದು ಮುಂದುವರಿಯಿತು.ಬಳಿಕ ನೆಬಿ ಸ.ಅ ರವರಿಗೆ ಏಕಾಂತ ಜೀವನ ತುಂಬಾನೇ ಇಷ್ಟವಾಯಿತು.ಜನರಿಂದ ದೂರವಿರಲು ಬಯಸಿದರು.ಹಿರಾ ಪರ್ವತದ ( ಈಗ ಪರ್ವತ ಜಬಲುನ್ನೂರ್ ಎಂಬ ಹೆಸರಲ್ಲಿ ಪ್ರಸಿದ್ಧಿಯಾಗಿದೆ ) ತುದಿಯಲ್ಲಿರುವ ಹಿರಾ ಗುಹೆಯಲ್ಲಿ ಅಲ್ಲಾಹನ ಆರಾಧನೆಯಲ್ಲಿ ತಲ್ಲೀನರಾದರು.ಹಾಗಿರುವಾಗ ರಮಳಾನ್ ತಿಂಗಳ ಹದಿನೇಳು ಸೋಮವಾರ ಜಿಬ್ರೀಲ್ ಅ.ಸ ಹಿರಾ ಗುಹೆಯಲ್ಲಿ ನೆಬಿ ಸ.ಅ ರವರ ಸಮೀಪ ಪ್ರತ್ಯಕ್ಷರಾದರು.ಜಿಬ್ರೀಲ್ ಅ.ಸ ಹೇಳಿದರು : ಇಖ್ರಹ್ ( ಓದಿರಿ ).ಇಬಾದತ್ ನಲ್ಲಿ ತಲ್ಲೀನರಾಗಿದ್ದ ನೆಬಿ ಸ.ಅ ಹೇಳಿದರು : ನನಗೆ ಓದಲು ಗೊತ್ತಿಲ್ಲ.ಆಗ ಜಿಬ್ರೀಲ್ ಅ.ಸ ನೋವು ಉಂಟಾಗುವ ರೀತಿಯಲ್ಲಿ ಗಟ್ಟಿಯಾಗಿ ನೆಬಿ ಸ.ಅ ರವರನ್ನು ಎರಡು ಕೈಗಳಿಂದ ಸನಿಹ ಎಳೆದು ಅಪ್ಪಿ ಹಿಡಿದರು.ಬಳಿಕ ಬಿಟ್ಟು ಬಿಟ್ಟರು.ಮತ್ತೆ ಜಿಬ್ರೀಲ್ ಅ.ಸ ಹೇಳಿದರು : ಇಖ್ರಹ್ ( ಓದಿರಿ ).ನೆಬಿ ಸ.ಅ ಹೇಳಿದರು : ನನಗೆ ಓದಲು ಗೊತ್ತಿಲ್ಲ.ಜಿಬ್ರೀಲ್ ಅ.ಸ ಮತ್ತೆ ಗಟ್ಟಿಯಾಗಿ ಅಪ್ಪಿ ಹಿಡಿದರು.ಬಿಟ್ಟ ಬಳಿಕ ಪುನಃ ಹೇಳಿದರು : ಇಖ್ರಹ್ ( ಓದಿರಿ ).ನೆಬಿ ಸ.ಅ ಹೇಳಿದರು : ನನಗೆ ಓದಲು ಗೊತ್ತಿಲ್ಲ.ಮೂರನೇ ಸಲ ನೆಬಿ ಸ.ಅ ರವರನ್ನು ಗಟ್ಟಿಯಾಗಿ ಅಪ್ಪಿ ಹಿಡಿದು ಬಿಟ್ಟ ಬಳಿಕ ಜಿಬ್ರೀಲ್ ಅ.ಸ ಅಲ್ಲಾಹನ ಪ್ರಥಮವಾದ ದಿವ್ಯ ಸಂದೇಶ ( ವಹ್ಯ್ ) ಓದಿ ಕೊಟ್ಟರು.
اقرأ باسم ربك الذي خلق.خلق الإنسان من علق.إقرأ وربك الأكرم.الذي علم بالقلم.علم الإنسان ما لم يعلم.
ಇದು ಕುರಾನ್ ಅವತೀರ್ಣದ ಆರಂಭವಾಗಿತ್ತು.ಅಂದು ನೆಬಿ ಸ.ಅ ರವರಿಗೆ ನಲ್ವತ್ತು ವರ್ಷ ಆರು ತಿಂಗಳು ಆರು ದಿವಸ ಪ್ರಾಯವಾಗಿತ್ತು.ನೆಬಿ ಸ.ಅ ರವರಿಗೆ ಲಭಿಸಿದ ಮಹೋನ್ನತ ನುಬುವ್ವತಿನ ಪ್ರಥಮ ದಿವ್ಯ ಸಂದೇಶದ ಭಾರವನ್ನು ಹೊರಲಾಗದೆ ತೀವ್ರ ಆಯಾಸ ಪ್ರಯಾಸವನ್ನು ಅನುಭವಿಸುತ್ತಾ ಭಯದೊಂದಿಗೆ ಹಿರಾ ಪರ್ವತದ ಗುಹೆಯಿಂದ ಮನೆಯ ಕಡೆ ವೇಗ ವೇಗವಾಗಿ ಚಲಿಸಿದರು.ನನ್ನ ಮೇಲೆ ಹೊದಿಕೆ ಹಾಸು,ನನ್ನ ಮೇಲೆ ಹೊದಿಕೆ ಹಾಸು ಎಂದು ಪ್ರಿಯ ಪತ್ನಿ ಖದೀಜ ಬೀವಿ ರ.ಅ ರವರಲ್ಲಿ ನಡುಗುವ ಧ್ವನಿಯಲ್ಲಿ ಹೇಳಿದರು.ಅವರು ನೆಬಿ ಸ.ಅ ರವರ ಮೇಲೆ ಹೊದಿಕೆ ಹಾಸಿದರು.ಭಯ ನೀಗಿದ ನಂತರ ಖದೀಜ ಬೀವಿ ರ.ಅ ರವರೊಂದಿಗೆ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದರು.ಆಗ ಖದೀಜ ರ.ಅ ಹೇಳಿದರು : ಅಲ್ಲಾಹನಾಣೆ ಸತ್ಯ..ಅಲ್ಲಾಹು ತಮ್ಮನ್ನು ಕೈ ಬಿಡಲ್ಲ..ತಾವು ಕುಟುಂಬ ಸಂಬಂಧವನ್ನು ಬೆಳೆಸುತ್ತೀರಿ.ಯಾತನಾಮಯ ಬದುಕನ್ನು ಅನುಭವಿಸುವವರ ಆಶಾ ಕಿರಣವಾಗಿದ್ದೀರಿ.ಇಲ್ಲದವರಿಗೆ ಸಹಾಯ ನೀಡುತ್ತೀರಿ.ಅತಿಥಿಗಳನ್ನು ಸತ್ಕರಿಸುತ್ತೀರಿ.ವಿಪತ್ತುಗಳು ಸಂಭವಿಸಿದರೆ ಸಹಾಯ ಸಹಕಾರ ತಲುಪಿಸುತ್ತೀರಿ..ಪ್ರಿಯ ಪತ್ನಿ ಖದೀಜ ರ.ಅ ರವರ ಸಾಂತ್ವನದ ಮಾತು ಕೇಳಿ ಪ್ರವಾದಿ ಸ.ಅ ರವರಿಗೆ ತುಂಬಾ ಸಮಾಧಾನವಾಯಿತು.
ಬಳಿಕ ಖದೀಜ ( ರ.ಅ ) ನೆಬಿ ಸ.ಅ ರವರನ್ನು ಕರೆದುಕೊಂಡು ತನ್ನ ಪಿತ್ರ ಸಹೋದರನ ಮಗನಾದ ವರಖತುಬ್ನು ನೌಫಲ್ ರನ್ನು ಸಮೀಪಿಸಿದರು.ಅವರು ತೌರಾತ್ ಮತ್ತು ಇಂಜೀಲ್ ಅರಿತವರಾಗಿದ್ದರು.ಹಿರಾ ಗುಹೆಯಲ್ಲಿ ನಡೆದ ಘಟನೆಯ ಕುರಿತು ಖದೀಜ ರ.ಅ ರವರಿಂದ ಕೇಳಿ ತಿಳಿದುಕೊಂಡ ನಂತರ ವರಖತುಬ್ನು ನೌಫಲ್ ಹೇಳಿದರು : ಸಂಶಯವೇ ಇಲ್ಲ.ಅದು ಮೂಸಾ ನೆಬಿ ಅ.ಸ ರವರ ಬಳಿ ಬಂದ ಮಲಕ್ ಆಗಿದೆ.ಹಿರಾ ಗುಹೆಯಲ್ಲಿ ನಿಮ್ಮನ್ನು ಭೇಟಿಯಾದದ್ದು ಅಲ್ಲಾಹನ ಮಲಕ್ ಆಗಿದ್ದಾರೆ.ನಿಮಗೆ ಓದಿಕೊಟ್ಟದ್ದು ಅಲ್ಲಾಹನ ದಿವ್ಯ ಸಂದೇಶ ( ವಹ್ಯ್ ) ಆಗಿದೆ.ನೀವು ಪ್ರವಾದಿಯಾಗಿದ್ದೀರಿ.ಕೆಲವು ಕಾಲದ ಬಳಿಕ ನಿಮ್ಮ ಜನತೆ ನಿಮ್ಮನ್ನು ಮಕ್ಕಾದಿಂದ ಹೊರಗೆ ಹಾಕಲಿದ್ದಾರೆ.ಅಂದು ನಾನಿದ್ದರೆ ?? ( ವರಖತುಬ್ನು ನೌಫಲ್ ಈ ಮಾತು ಹೇಳುವ ಸಂದರ್ಭದಲ್ಲಿ ವಯಸ್ಸಾಗಿದ್ದರು ) ಆಗ ನೆಬಿ ಸ.ಅ ಆಶ್ಚರ್ಯದಿಂದ ಕೇಳಿದರು : ನನ್ನ ನಾಡಿನ ಜನ ನನ್ನನ್ನು ಹೊರ ಹಾಕುವರೇ ??!!
ವರಖತುಬ್ನು ನೌಫಲ್ ಹೇಳಿದರು : ಪ್ರವಾದಿಯಾಗಿ ಆಯ್ಕೆಯಾದವರು ಎಲ್ಲರೂ ಶತ್ರುತ್ವಕ್ಕೆ ವಿಧೇಯರಾಗಿದ್ದಾರೆ.ಎಲ್ಲ ಪ್ರವಾದಿಗಳಿಗೂ ಶತ್ರುಗಳು ಇದ್ದರು. ( ವರಖತುಬ್ನು ನೌಫಲ್ ಕೆಲವು ವರ್ಷದ ಬಳಿಕ ಮರಣ ಹೊಂದಿದರು.ನೆಬಿ ಸ.ಅ ರವರ ಮತ್ತು ಇಸ್ಲಾಮಿನ ಶತ್ರುಗಳ ಉಪಟಳ,ತೊಂದರೆ ಹೆಚ್ಚಾದಾಗ ಸ್ವಂತ ನಾಡಾದ ಮಕ್ಕಾವನ್ನು ಬಿಟ್ಟು ಹೋಗುವ ಸಂದರ್ಭ ಬಂದಿತ್ತು. ಆ ಸಮಯ ವರಖತುಬ್ನು ನೌಫಲ್ ಇರಲಿಲ್ಲ).
ಮುಂದುವರಿಯುವುದು.
® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob - +918105745760
ಮೂಲ : ಅರಬಿ ಮಲಯಾಳ
No comments:
Post a Comment