Wednesday, 19 October 2016

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..ಸಂಚಿಕೆ -09

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ

----------------------------
               ಸಂಚಿಕೆ -09

ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಜ್ರಾ.

ಅಖಬಃ ಕರಾರು..

ನೆಬಿ ಸ.ಅ ರವರು ಇಸ್ಲಾಮಿನ ಪ್ರಬೋಧನೆ ಪ್ರಾರಂಭಿಸಿ ಹತ್ತು ವರ್ಷ ಉರುಳಿತು.ಹಜ್ಜಿಗೆ ಬರುವ ಯಾತ್ರಿಕರನ್ನು ನೆಬಿ ಸ.ಅ ಸಮೀಪಿಸಿ ಇಸ್ಲಾಮಿನ ಪ್ರಬೋಧನೆ ನೀಡುತ್ತಿದ್ದರು.ಅರಬೀ ಗೋತ್ರಗಳಲ್ಲಿ ಹಲವು ಗೋತ್ರಗಳನ್ನು ಇಸ್ಲಾಮಿಗೆ ಆಹ್ವಾನಿಸಿದರು.ಕೆಲವರು ಉತ್ತಮ ರೀತಿಯಲ್ಲಿ ಸ್ಪಂದಿಸಿದರು.ಇನ್ನೂ ಕೆಲವರು ಕೆಟ್ಟ ರೀತಿಯಲ್ಲಿ ಪ್ರತಿಕ್ರಯಿಸಿದರು.ಕೆಲವರಂತೂ ಇಸ್ಲಾಮಿಗೆ ಬರಲು ಶರತ್ತುಗಳನ್ನು ಮುಂದಿಟ್ಟರು.ಬನೂಆಮಿರ್ ನೆಬಿ ಸ.ಅ ರವರ ನಂತರ ಅಧಿಕಾರ ನೀಡಬೇಕೆಂದಾಗಿತ್ತು ಶರತ್ತು ಮುಂದಿಟ್ಟದ್ದು.ಅಧಿಕಾರ ಅಲ್ಲಾಹನದ್ದಾಗಿದೆ.ಅವನು ಇಚ್ಚಿಸಿದವರಿಗೆ ಅಧಿಕಾರವನ್ನು ನೀಡುತ್ತಾನೆ ಎಂದಾಗಿತ್ತು ನೆಬಿ ಸ.ಅ ರವರ ಮರು ಪ್ರತಿಕ್ರಿಯೆ.
        ಅತ್ತ ಮದೀನದಲ್ಲಿ ಪ್ರಸಿದ್ಧವಾದ ಅವ್ಸ್ ಖಝ್ರಜ್ ಎಂಬ ಎರಡು ಗೋತ್ರಗಳಿತ್ತು.ಅವರ ನೆರೆಹೊರೆಯವರಾಗಿ ಬನೂ ಖೈನುಖಾಹ್, ಬನೂ ಖುರೈಲಃ, ಬನೂನ್ನಳೀರ್ ಎಂಬ ಯಹೂದಿ ಗೋತ್ರಗಳು ವಾಸಿಸುತ್ತಿದ್ದರು. " ಒಬ್ಬ ಪ್ರವಾದಿಯ ಆಗಮನವಾಗಲಿದೆ.ಆದ್ ಮತ್ತು ಇರಮ್ ನನ್ನು ವಧಿಸಿದಂತೆ ನಾವು ಆ ಪ್ರವಾದಿಯ ಜತೆಗೆ ನಿಂತು ನಿಮ್ಮನ್ನು ನಾವು ವಧಿಸಲಿದ್ದೇವೆ " ಎಂದು ಯಹೂದಿಗಳು ಜಂಭ ಕೊಚ್ಚುತ್ತಿದ್ದರು.
     ನುಬುವ್ವತಿನ ಹನ್ನೊಂದನೇ ವರ್ಷ ಹಜ್ಜಿಗೆ ಮದೀನದಿಂದ ಮಕ್ಕಾಕ್ಕೆ ಬಂದ ಖಜ್ರಜ್ ಗೋತ್ರದ ಆರು ಮಂದಿಯನ್ನು ನೆಬಿ ಸ.ಅ ಕಂಡು ಮಾತನಾಡಿದರು.ಇಸ್ಲಾಮಿನ ಕುರಿತು ತಿಳಿದ ಅವರು ಯಹೂದಿಗಳು ಹೇಳಿದ ಮಾತನ್ನು ನೆನಪಿಸಿ ಇಸ್ಲಾಂ ಧರ್ಮ ಸ್ವೀಕರಿಸಿದರು.ಅವರು ಹಜ್ ಕರ್ಮ ಮುಗಿದ ಬಳಿಕ ಮದೀನಕ್ಕೆ ಹೋಗಿ ಜನರನ್ನು ಇಸ್ಲಾಂ ಧರ್ಮಕ್ಕೆ ಆಹ್ವಾನಿಸಲು ಪ್ರಾರಂಭಿಸಿದರು.ಧಾರಾಳ ಜನರು ಇಸ್ಲಾಂ ಧರ್ಮದ ಅನುಯಾಯಿಗಳಾದರು.
         ನುಬುವ್ವತಿನ ಹನ್ನೆರಡನೇ ವರ್ಷ ಹಜ್ ವೇಳೆಯಲ್ಲಿ ಖಝ್ರಜ್ ಗೋತ್ರದ ಹತ್ತು ಮಂದಿ ಅವ್ಸ್ ಗೋತ್ರದ ಎರಡು ಮಂದಿ ಅಖಬಃದ ಸಮೀಪ ನೆಬಿ ಸ.ಅ ರವರೊಂದಿಗೆ ಒಪ್ಪಂದ ಮಾಡಿದರು. " ಅಲ್ಲಾಹನಿಗಲ್ಲದೆ ಆರಾಧಿಸುವುದಿಲ್ಲ.ಶಿರ್ಕ್ ಮಾಡುವುದಿಲ್ಲ.ಕಳ್ಳತನ, ವ್ಯಭಿಚಾರ ಮಾಡುವುದಿಲ್ಲ.ಮಕ್ಕಳನ್ನು ವಧಿಸುವುದಿಲ್ಲ. ಸುಳ್ಳು ಹೇಳುವುದಿಲ್ಲ.ಉತ್ತಮ ಕಾರ್ಯಗಳಲ್ಲಿ ನೆಬಿ ಸ.ಅ ರವರನ್ನು ಧಿಕ್ಕರಿಸುವುದಿಲ್ಲ." ಎಂದು ಅವರು ಸತ್ಯ ಪ್ರತಿಜ್ಞೆಯಲ್ಲಿ ಕರಾರು ಮಾಡಿದರು.ಇದು ಪ್ರಥಮ ಅಖಬಃ ಒಪ್ಪಂದ ಎಂಬ ಹೆಸರಿನಲ್ಲಿ ಅರಿಯಲ್ಪಡುತ್ತದೆ.
     ಬೈಅತ್ ಮಾಡಿದವರು ಮದೀನಕ್ಕೆ ಮರಳುವಾಗ ಮಿಸ್ಅಬುಬ್ನು ಉಮೈರ್ ರ.ಅ ರವರನ್ನು ಕರ್ಮಶಾಸ್ತ್ರ ಕಲಿಸುವ ಸಲುವಾಗಿ ಅವರೊಂದಿಗೆ ನೆಬಿ ಸ.ಅ ಕಳುಹಿಸಿಕೊಟ್ಟರು.ಮಿಸ್ಅಬುಬ್ನು ಉಮೈರ್ ರ.ಅ ರವರ ಮುಖಾಂತರ ಸಅದು ಬ್ನು ಮುಆದ್ ರ.ಅ, ಉಸೈದು ಬ್ನು ಹುಲೈರ್ ರ.ಅ ಎಂಬ ಪ್ರಮುಖರು ಇಸ್ಲಾಂ ಸ್ವೀಕರಿಸಿದರು.ಮದೀನದಲ್ಲಿ ಇಸ್ಲಾಂ ವ್ಯಾಪಕ ಪ್ರಚಾರ ಪಡೆಯಿತು.
     ನುಬುವ್ವತಿನ ಹದಿಮೂರನೇ ವರ್ಷ ಮದೀನದಿಂದ ಹಜ್ ಗೆ ಬಂದವರಲ್ಲಿ 73 ಪುರುಷರು 2 ಸ್ತ್ರೀಯರು ಇದ್ದರು.ಅವರು ರಾತ್ರಿ ವೇಳೆ ಅಖಬಃದ ಸಮೀಪ ನೆಬಿ ಸ.ಅ ರವರನ್ನು ಸಮೀಪಿಸಿದರು.ತಾವು ಮದೀನಕ್ಕೆ ಬರುವುದಾದರೆ ನಮ್ಮ ಪತ್ನಿ ಮಕ್ಕಳನ್ನು ಸಂರಕ್ಷಿಸುವ ಹಾಗೆ ತಮ್ಮನ್ನು ಸಂರಕ್ಷಿಸುತ್ತೇವೆ ಎಂದು ನೆಬಿ ಸ.ಅ ರವರೊಂದಿಗೆ ಬೈಅತ್ ಮಾಡಿದರು.ನೆಬಿ ಸ.ಅ ಅವರಿಂದ ಈ ಜವಾಬ್ದಾರಿಯನ್ನು ನಿರ್ವಹಿಸಲು 12 ನಾಯಕರನ್ನು ಆಯ್ಕೆ ಮಾಡಿದರು.ಇದಾಗಿದೆ ಎರಡನೇ ಅಖಬಃ ಒಪ್ಪಂದ.

ಮುಸ್ಲಿಮರ ಪಲಾಯನ..

ರಾತ್ರಿ ನಡೆದ ರಹಸ್ಯ ಒಪ್ಪಂದ ಬೆಳಿಗ್ಗೆಯಾಗುವಷ್ಟರಲ್ಲಿ ಕುರೈಶಿಗಳು ಹೇಗೋ ಅರಿತರು.ಅವರು ಮದೀನದಿಂದ ಬಂದ ಹಾಜಿಗಳೊಂದಿಗೆ ಹೇಳಿದರು : ನೀವು ಮುಹಮ್ಮದ್ ನನ್ನು ಕೊಂಡು ಹೋಗಲು ಬಂದವರು.ನಮ್ಮ ವಿರುದ್ಧ ಯುದ್ಧ ಮಾಡಲು ನೀವು ಅವನೊಂದಿಗೆ ಗೂಢಾಲೋಚನೆ ನಡೆಸಿದ್ದೀರಿ.ಇದು ಕೇಳಿದ ಮುಶ್ರಿಕುಗಳಾದ ಮದೀನ ನಿವಾಸಿಗಳು ಹೇಳಿದರು. : ಅಂತಹ ವಿಷಯವೇ ಇಲ್ಲ.ನಿಮ್ಮೊಂದಿಗೆ ಯುದ್ಧ ಮಾಡಲು ನಾವು ಒಪ್ಪಂದ ಮಾಡಲೇ ಇಲ್ಲ.
       ಇದರ ಬಳಿಕ ಮಕ್ಕಾ ಮುಶ್ರಿಕರ ಉಪಟಳ ತುಂಬಾ ಹೆಚ್ಚಾಯಿತು.ಆಗ ನೆಬಿ ಸ.ಅ ಮುಸ್ಲಿಮರೊಂದಿಗೆ ಮದೀನಕ್ಕೆ ಹಿಜ್ರ ಹೋಗಲು ಆದೇಶಿಸಿದರು.ಅವರು ಗುಂಪುಗುಂಪಾಗಿಯೂ ಒಬ್ಬಂಟಿಗರಾಗಿಯೂ ಮದೀನಕ್ಕೆ ಹಿಜ್ರಾ (ವಲಸೆ) ಹೋದರು.ಇಸ್ಲಾಮ್ ದೀನಿಗಾಗಿ ಸ್ವಂತ ಊರು,ಮನೆ ಸಂಪತ್ತನ್ನು ಉಪೇಕ್ಷಿಸಿ ತಂದೆ ತಾಯಿ ಮಕ್ಕಳು,ಕುಟುಂಬಸ್ಥರನ್ನು ಬಿಟ್ಟು ಮದೀನಕ್ಕೆ ಪಲಾಯನ ಮಾಡಿದರು.ಅಂತಿಮವಾಗಿ ಮಕ್ಕಾದಲ್ಲಿ ಅಬೂಬಕರ್ ಸಿದ್ದೀಖ್ ರ.ಅ, ಅಲಿ ರ.ಅ ಮತ್ತು ಕೆಲವೊಂದು ದುರ್ಬಲರು ಮಾತ್ರ ಬಾಕಿಯಾದರು.
     ಕುರೈಶಿಗಳು ಎಚ್ಚೆತ್ತರು.ಮಕ್ಕಾದಿಂದ ಮದೀನಕ್ಕೆ ಹಿಜ್ರಾ ಹೋದ ಮುಹಾಜಿರ್ ಗಳೊಂದಿಗೆ ನೆಬಿ ಸ.ಅ ರವರು ಕೂಡಾ ಹೋಗುವರು ಎಂದು ಹೆದರಿದರು.ಮಕ್ಕಾ ಮುಶ್ರಿಕರು ದಾರುನ್ನದ್ವಾ ದಲ್ಲಿ ಒಗ್ಗೂಡಿದರು.ವಿಷಯಾವಲೋಕನ ಮಾಡಿದರು.ಕಾವೇರಿದ ಚರ್ಚೆ ನಡೆಯಿತು.ಸೆರೆಮನೆಯಲ್ಲಿ ಬಂಧನದಲ್ಲಿರಿಸುವಾ.ಊರಿನಿಂದ ಗಡೀಪಾರು ಮಾಡುವಾ.ಕೊಂದು ಬಿಡುವಾ ಎಂಬ ಅಭಿಪ್ರಾಯಗಳು ಒಬ್ಬೊಬ್ಬರಿಂದ ಬಂತು.ಕೊನೆಗೆ ನೆಬಿ ಸ.ಅ ರವರನ್ನು ಕೊಂದು ಬಿಡುವಾ ಎಂಬ ಅಭಿಪ್ರಾಯಕ್ಕೆ ಅವರೆಲ್ಲರೂ ಬಂದರು.ಪ್ರತಿಯೊಂದು ಗೋತ್ರಗಳಿಂದ ಶಕ್ತರಾದ ಒಬ್ಬೊಬ್ಬ ಯುವಕರನ್ನು ಆರಿಸುವುದು.ರಾತ್ರಿ ಖಡ್ಗದೊಂದಿಗೆ ನೆಬಿ ಸ.ಅ ರವರ ಮನೆಯನ್ನು ಸುತ್ತುವರಿಯುವುದು.ಮನೆಯಿಂದ ಹೊರಬರುವಾಗ ಎಲ್ಲರೂ ಒಟ್ಟಿಗೆ ಸೇರಿ ಕೊಲ್ಲುವುದು ಎಂಬುದಾಗಿತ್ತು ಅವರ ತೀರ್ಮಾನ.ಆದರೆ ಅಲ್ಲಾಹನು ಮುಂಚೆಯೇ ನೆಬಿ ಸ.ಅ ರವರಿಗೆ ಶತ್ರುಗಳ ತೀರ್ಮಾನವನ್ನು ತಿಳಿಸಿ ಕೊಟ್ಟಿದ್ದನು.ನೆಬಿ ಸ.ಅ ಮತ್ತು ಅಬೂಬಕರ್ ಸಿದ್ದೀಖ್ ರ.ಅ ಯಾತ್ರೆಗೆ ಮೊದಲೇ ರೆಡಿಯಾಗಿದ್ದರು.ಶತ್ರುಗಳು ತೀರ್ಮಾನದಂತೆ ರಾತ್ರಿ ನೆಬಿ ಸ.ಅ ರವರ ಮನೆ ಸುತ್ತುವರಿದರು.ಮನೆಯಲ್ಲಿ ನೆಬಿ ಸ.ಅ ರವರೊಂದಿಗೆ ಅಲಿ ರ.ಅ ಇದ್ದರು.ತನ್ನ ಮಂಚದಲ್ಲಿ ತನ್ನ ಕಂಬಳಿ ಹೊದ್ದು ಮಲಗಲು ನೆಬಿ ಸ.ಅ ಅಲಿ ರ.ಅ ರವರಿಗೆ ನಿರ್ದೇಶಿಸಿದರು.ನೆಬಿ ಸ.ಅ ಒಂದು ಹಿಡಿ ಮಣ್ಣು ತೆಗೆದು ಯಾಸೀನ್ ಸೂರತಿನ وجعلنا من بين أيديهم سدا ಎಂದು ಆರಂಭಗೊಳ್ಳುವ ಆಯತ್ ಓದಿ ಅವರ ನೇರ ಎಸೆದರು.ಆ ಮಣ್ಣು ಶತ್ರುಗಳ ಕಣ್ಣಿಗೆ ಹೋಗಿ ಬಿತ್ತು.ಎಲ್ಲರೂ ಕಣ್ಣು ಉಜ್ಜಿ ಕೊಳ್ಳುತ್ತಿರುವ ಮಧ್ಯೆ ನೆಬಿ ಸ.ಅ ಅವರ ಎದುರಿನಿಂದಲೇ ಮನೆಯಿಂದ ಹೊರ ಸಾಗಿ ಅಬೂಬಕರ್ ರ.ಅ ರವರ ಮನೆ ತಲುಪಿದರು.

ಮುಂದೇನಾಯಿತು ನೋಡೋಣ ಮುಂದಿನ ಸಂಚಿಕೆಯಲ್ಲಿ....

® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760

No comments:

Post a Comment

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿ...