ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ
---------------------------
ಸಂಚಿಕೆ -10
ನೆಬಿ ಸ.ಅ ಮನೆಯಿಂದ ಹೊರ ಬಂದು ಶತ್ರುಗಳಿಂದ ಪಾರಾಗಿ ಅಬೂಬಕರ್ ರ.ಅ ರವರ ಮನೆ ತಲುಪಿದರು.ಅಲ್ಲಿಂದ ಯಾತ್ರೆಗೆ ಬೇಕಾದ ಆಹಾರ ಪಾನೀಯಗಳನ್ನು ತೆಗೆದು ಅಬೂಬಕರ್ ರ.ಅ ರವರ ಜೊತೆಯಾಗಿ ಯಾತ್ರೆ ಪ್ರಾರಂಭಿಸಿದರು.ಮಕ್ಕಾದ ಸವ್ರ್ ಗುಹೆ ತಲುಪಿದರು.ನೆಬಿ ಸ.ಅ ರವರನ್ನು ವಧಿಸಲು ಮನೆ ಸುತ್ತುವರಿದಿದ್ದ ಕುರೈಶೀ ಯುವಕರು ಮಂಚದಲ್ಲಿ ಮಲಗಿರುವುದು ನೆಬಿ ಸ.ಅ ಆಗಿರುವರು ಎಂದು ಭಾವಿಸಿದರು.ಸುಬಹಿ ಆದಾಗ ಅಲೀ ರ.ಅ ನಿದ್ರೆಯಿಂದ ಎದ್ದರು.ನೆಬಿ ಸ.ಅ ಇಲ್ಲಿಂದ ರಾತ್ರಿಯೇ ಹೊರಟು ಹೋಗಿದ್ದಾರೆ ಎಂದು ಆವಾಗಲೇ ಕುರೈಶಿಗಳು ತಿಳಿದದ್ದು.ಕುರೈಶಿಗಳ ಕೋಪ ನೆತ್ತಿಗೇರಿತು.ನಾಲ್ಕು ದಿಕ್ಕುಗಳಿಗೂ ನೆಬಿ ಸ.ಅ ರವರನ್ನು ಹುಡುಕಿ ಕೊಂಡು ತರಲು ಜನರನ್ನು ಛೂ ಬಿಟ್ಟರು.ಹುಡುಕಿ ಕೊಂಡು ಬರುವವರಿಗೆ ನೂರು ಒಂಟೆಯನ್ನು ಬಹುಮಾನವಾಗಿ ನೀಡಲಾಗುವುದೆಂದು ಪ್ರಖ್ಯಾಪಿಸಿದರು.ಶತ್ರುಗಳು ನಾಲ್ಕು ದೆಸೆಯಿಂದಲೂ ಹುಡುಕಲು ಆರಂಭಿಸಿದರು.ಕೆಲವರು ನೆಬಿ ಸ.ಅ ಮತ್ತು ಅಬೂಬಕರ್ ರ.ಅ ಅಡಗೀ ಕೂತ ಸವ್ರ್ ಗುಹೆ ಯ ಸನಿಹಕ್ಕೂ ಬಂದರು.ಇದನ್ನು ನೋಡುತ್ತಿದ್ದ ಅಬೂಬಕರ್ ರ.ಅ ಭಯಭೀತರಾದರು.ನೆಬಿ ಸ.ಅ ಅವರನ್ನು ಸಮಾಧಾನಿಸಿದರು.ದುಃಖಿಸಬೇಡ.ಅಲ್ಲಾಹು ನಮ್ಮೊಂದಿಗಿದ್ದಾನೆ.ಅಬೂಬಕರ್ ರ.ಅ ಹೇಳಿದರು : ಶತ್ರುಗಳು ಗುಹೆಯ ಕೆಳಭಾಗ ನೋಡಿದರೆ ನಮ್ಮನ್ನು ಅವರು ಕಾಣುವರು.ನೆಬಿ ಸ.ಅ ಹೇಳಿದರು : ನಾವು ಎರಡು ಮಂದಿಯ ಕುರಿತು ನೀವು ಏನು ಭಾವಿಸಿದ್ದೀರಿ.ಮೂರನೆಯವನಾಗಿ ಅಲ್ಲಾಹು ನಮ್ಮ ಸಹಾಯಕ್ಕಿದ್ದಾನೆ.ಅಲ್ಲಾಹು ಶತ್ರುಗಳನ್ನು ಅವರಿಂದ ದೂರ ಮಾಡಿದನು.ಗುಹೆಯ ಮೇಲ್ಭಾಗದಲ್ಲಿ ಜೇಡರ ಬಲೆಯನ್ನು ಮತ್ತು ಎರಡು ಪಾರಿವಾಳಗಳು ಗೂಡುಕಟ್ಟಿ ಮೊಟ್ಟೆ ಇಟ್ಟಿದ್ದನ್ನು ನೋಡಿದ ಶತ್ರುಗಳು ಈ ಗುಹೆಯೊಳಗೆ ಯಾರೂ ಅಡಗಿ ಕೊಳ್ಳಲಿಕ್ಕೆ ಸಾಧ್ಯವಿಲ್ಲ ಎಂದು ಭಾವಿಸಿ ತಿರುಗಿ ಹೋದರು.
ಅಬೂಬಕರ್ ರ.ಅ ರವರ ಮಗನಾದ ಅಬ್ದುಲ್ಲಾಹ್ ರ.ಅ ರವರನ್ನು ಶತ್ರುಗಳ ವಿವರಗಳನ್ನು ತಿಳಿದು ರಾತ್ರಿ ಅವರಿಗೆ ತಿಳಿಸಲು ಏರ್ಪಾಟು ಮಾಡಿದ್ದರು.ಪುತ್ರಿ ಅಸ್ಮಾ ರ.ಅ ಆಹಾರ ಪಾನೀಯಗಳನ್ನು ಅವರಿಗೆ ಕೊಂಡುಹೋಗಿ ಮುಟ್ಟಿಸುತ್ತಿದ್ದರು.ಮೂರು ದಿವಸಗಳ ಬಳಿಕ ಅಂದರೆ ಶತ್ರುಗಳ ಹುಡುಕಾಟ ಸ್ವಲ್ಪ ಸ್ಥಗಿತವಾದ ನಂತರ ಮುಂಚೆಯೇ ನಿರ್ಧರಿಸಿದ ತೀರ್ಮಾನದಂತೆ ಗುರುವಾರದಂದು ಮದೀನಕ್ಕೆ ಹೋಗುವ ಹಾದಿ ತೋರಿಸುವ ಅಬ್ದುಲ್ಲಾಹಿ ಇಬ್ನು ಉರೈಖಿಳ್ ಎರಡು ಒಂಟೆಗಳೊಂದಿಗೆ ಆಗಮಿಸಿದರು.ನೆಬಿ ಸ.ಅ ಮತ್ತು ಅಬೂಬಕರ್ ಸಿದ್ದೀಖ್ ರ.ಅ ರವರನ್ನು ಒಂಟೆಯ ಮೇಲೇರಿಸಿ ಸಮುದ್ರ ಕಿನಾರೆಯ ಮೂಲಕ ಮದೀನಕ್ಕೆ ಯಾತ್ರೆ ಆರಂಭಿಸಿದರು.ಸಹಾಯಕನಾಗಿ ಆಮಿರುಬ್ನು ಫುಹೈರ ಕೂಡಾ ಜತೆಗಿದ್ದರು.
ದಾರಿ ಮಧ್ಯೆ ಸುರಾಖತು ಇಬ್ನು ಮಾಲಿಕ್ ಎಂಬ ದುಷ್ಟ ತನ್ನ ಕುದುರೆಯ ಮೂಲಕ ಇವರನ್ನು ಹಿಂಬಾಲಿಸಲು ಶುರು ಮಾಡಿದನು.ಸ್ವಲ್ಪ ಮುಂದೆ ಸಾಗಿದಂತೆ ಕುದುರೆ ಎಡರಿ ಬಿತ್ತು.ಕುದುರೆಯನ್ನು ಎದ್ದು ನಿಲ್ಲಿಸಿ ಮತ್ತೆ ಹಿಂಬಾಲಿಸಿದಾಗ ಕುದುರೆಯ ಕಾಲುಗಳು ಈವಾಗ ಮಣ್ಣಿನಡಿಗೆ ಹುದುಗಿ ಹೋಯಿತು.ಕುದುರೆಯನ್ನು ಎಬ್ಬಿಸಲು ಆಗದೆ ಸುರಾಖ ಚಡಪಡಿಸಿದನು.ನೆಬಿ ಸ.ಅ ರವರನ್ನು ಹಿಂಬಾಲಿಸಲು ಸಾಧ್ಯವಿಲ್ಲವೆಂಬುದನ್ನು ಆತ ಅರಿತ ಬಳಿಕ ನೆಬಿ ಸ.ಅ ಆತನಿಗೆ ಅಭಯ ಹಸ್ತ ನೀಡಿದರು.ಆತ ಮತ್ತೆ ಹಿಂಬಾಲಿಸಲಿಲ್ಲ.
ನೆಬಿ ಸ.ಅ ಪವಿತ್ರ ಮದೀನದಲ್ಲಿ...
ಮದೀನಾ ನಿವಾಸಿಗಳು ನೆಬಿ ಸ.ಅ ಮಕ್ಕಾದಿಂದ ಹೊರಟ ವಿಷಯ ಅರಿತರು.ಪ್ರತೀ ದಿನ ಬೆಳಿಗ್ಗೆ ಮದೀನದ ಗಡಿ ಪ್ರದೇಶದಲ್ಲಿ ಅವರು ರಸೂಲ್ ಸ.ಅ ರವರನ್ನು ಆಕಾಂಕ್ಷೆಯಿಂದ ಕಾಯುತ್ತಿದ್ದರು.ಮಧ್ಯಾಹ್ನದ ಸಮಯದಲ್ಲಿ ಅವರು ಮರಳಿ ಹೋಗುತ್ತಿದ್ದರು.ಒಂದು ದಿನ ಒಬ್ಬ ಯಹೂದಿ ಜೋರಾಗಿ ಕರೆದು ಹೇಳಿತ್ತಿದ್ದುದು ಅವರು ಆಲಿಸಿದರು : ಬನೂ ಖೈಲದವರೇ. ಇದೋ ನೋಡಿ.ನಿಮ್ಮ ಸೌಭಾಗ್ಯ ಆಗತವಾಗಿದೆ.ನೀವು ಕಾಯುತ್ತಿದ್ದ ಪ್ರವಾದಿ ಆಗಮಿಸುತ್ತಿದ್ದಾರೆ.ಇದು ಆಲಿಸಿದ ಕ್ಷಣ ಮಾತ್ರದಲ್ಲಿ ಅವರು ಆಯುಧಗಳೊಂದಿಗೆ ದೌಡಾಯಿಸಿ ಹರ್ರಃ ಎಂಬ ಸ್ಥಳದಲ್ಲಿ ನೆಬಿ ಸ.ಅ ಮತ್ತು ಅಬೂಬಕರ್ ರ.ಅ ರವರನ್ನು ಸ್ವಾಗತಿಸಿ ಸ್ವೀಕರಿಸಿದರು.
ನೆಬಿ ಸ.ಅ ಮತ್ತು ಸಂಘವು ಸಂಚರಿಸಿ ಮದೀನ ಸಮೀಪದ ಖುಬಾಹ್ ಎಂಬ ಪ್ರದೇಶಕ್ಕೆ ತಲುಪಿದರು.ರಬೀವುಲ್ ಅವ್ವಲ್ ಎಂಟು ಸೋಮವಾರವಾಗಿತ್ತು.ನೆಬಿ ಸ.ಅ ರವರಿಗೆ 53 ವರ್ಷ ಪ್ರಾಯವಾಗಿತ್ತು.ಬನೂ ಅಮ್ರುಬ್ನು ಅವ್ಫ್ ಎಂಬವರ ಮನೆಯಲ್ಲಿ ನಾಲ್ಕು ದಿನ ತಂಗಿದರು.ಅಲ್ಲಿ ಮಸ್ಜಿದು ಖುಬಾಹ್ ನಿರ್ಮಾಣವಾಯಿತು.ಮಕ್ಕಾದಲ್ಲಿದ್ದ ಸಂದರ್ಭದಲ್ಲಿ ನೆಬಿ ಸ.ಅ ರವರ ಬಳಿ ಸೂಕ್ಷಿಸಲು ನೀಡಲ್ಪಟ್ಟಿದ್ದ ಸೊತ್ತುಗಳನ್ನು ಅದರ ಅವಕಾಶಿಗಳಿಗೆ ನೀಡುವ ಜವಾಬ್ದಾರಿಯನ್ನು ಅಲೀ ರ.ಅ ರವರಿಗೆ ನೆಬಿ ಸ.ಅ ವಹಿಸಿದ್ದರು.ಅಂತೆಯೇ ಆ ಸೊತ್ತುಗಳನ್ನು ಅದರ ಅವಕಾಶಿಗಳಿಗೆ ನೀಡಿದ ಬಳಿಕ ಅಲೀ ರ.ಅ ನೆಬಿ ಸ.ಅ ರವರ ಜತೆ ಸೇರಿಕೊಂಡರು.
ನಾಲ್ಕು ದಿನಗಳ ಬಳಿಕ ಶುಕ್ರವಾರದಂದು ಬೆಳಿಗ್ಗೆ ಖುಬಾಹ್ ನಿಂದ ಯಾತ್ರೆ ಮುಂದುವರಿಸಿದರು.ಬನೂ ಸಾಲಿಮುಬ್ನು ಅವ್ಫ್ ಎಂಬವರ ಜಾಗದಲ್ಲಿ ಪ್ರಥಮ ಜುಮುಅಃ ನಮಾಜು ನಿರ್ವಹಿಸಿದರು.ಆವಾಗ ನೆಬಿ ಸ.ಅ ರವರೊಂದಿಗೆ ನೂರು ಮುಸ್ಲಿಮರಿದ್ದರು.ಮುಂದುವರಿದು ಒಂದು ದೊಡ್ಡ ಗುಂಪಿನೊಂದಿಗೆ ಮದೀನಃ ದ ಮಣ್ಣಿಗೆ ಪ್ರವೇಶಿಸಿದರು.ನೆಬಿ ಸ.ಅ ಮತ್ತು ಅನುಯಾಯಿಗಳು ಮದೀನ ಪ್ರವೇಶಿಸುತ್ತಿದ್ದಂತೆಯೇ ಪುಳಕಿತಗೊಂಡು ಮದೀನ ನಿವಾಸಿಗಳು ಹರ್ಷೋಲ್ಲಸಿತರಾಗಿ ದಫ್ಫ್ ಬಾರಿಸಿ ಹಾಡಿಹೊಗಳಿ ಸ್ವಾಗತಿಸಿ ಸ್ವೀಕರಿಸಿದರು.
طلع البدر علينا.من ثنيات الوداع
وجب الشكر علينا.ما دعا لله داع
أيهاالمبعوث فينا.جئت بالأمر المطاع
ನೆಬಿ ಸ.ಅ ಮತ್ತು ಅನುಯಾಯಿಗಳು ಮದೀನದ ಒಂದೊಂದೇ ಮನೆಗಳನ್ನು ಹಾದು ಹೋಗುತ್ತಿದ್ದರು.ಒಂಟೆಯ ಮೂಗುದಾರವನ್ನು ಹಿಡಿದು ಮದೀನದ ಪ್ರತೀ ಅನ್ಸಾರಿಯೂ ನಮ್ಮ ಮನೆಗೆ ಬರಬೇಕೆಂದು ಆಹ್ವಾನ ನೀಡಿದರು.ನೆಬಿ ಸ.ಅ ಹೇಳಿದರು : ಒಂಟೆಯನ್ನು ಬಿಟ್ಟು ಬಿಡಿರಿ. ಅದು ಎಲ್ಲಿ ನಿಲ್ಲಬೇಕೆಂದು ಅದಕ್ಕೆ ನಿರ್ದೇಶ ಇದೆ.ಒಂಟೆಯು ಮುಂದೆ ಸಾಗುತ್ತಾ ಕೊನೆಗೆ ಅಬೂ ಅಯ್ಯೂಬುಲ್ ಅನ್ಸಾರಿ ರ.ಅ ರವರ ಮನೆಯ ಮುಂದೆ ಒಂಟೆ ಮೊಣ ಕಾಲೂರಿದವು.ಇಂಶಾ ಅಲ್ಲಾಹ್..ಇಲ್ಲಿಯಾಗಿದೆ ನಮ್ಮ ವಾಸ ಸ್ಥಳ.
رب أنزلني منزلا مباركا وأنت خير المنزلين
ಎಂದು ಹೇಳುತ್ತಾ ನೆಬಿ ಸ.ಅ ಇಳಿದರು.ನೆಬಿ ಸ.ಅ ರವರ ಒಂಟೆ ನಿಂತ ಸ್ಥಳದಲ್ಲಿ ಮಸ್ಜಿದು ನಬವೀ ನಿರ್ಮಿಸಲಾಯಿತು.ಒಂದು ವರ್ಷದಲ್ಲಿ ಮಸೀದಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಯಿತು.ಈ ಒಂದು ವರ್ಷ ನೆಬಿ ಸ.ಅ ಅಬೂ ಅಯ್ಯೂಬಿಲ್ ಅನ್ಸಾರಿ ರ.ಅ ರವರ ಮನೆಯಲ್ಲಿ ವಾಸಿಸಿದರು.
ಮುಹಾಜಿರುಗಳು ಮಕ್ಕಾದಿಂದ ಮದೀನಕ್ಕೆ ಬರುತ್ತಲೇ ಇದ್ದರು.ಸೆರೆಹಿಡಿಯಲ್ಪಟ್ಟವರು ಮತ್ತು ಕೆಲವೊಂದು ಬಲಹೀನರು ಮಾತ್ರ ಮಕ್ಕಾದಲ್ಲಿ ಬಾಕಿಯಾಗಿದ್ದರು.ಮದೀನಕ್ಕೆ ಬಂದವರಲ್ಲಿ ಹಲವರಿಗೆ ವಾತಾವರಣ ಬದಲಾದುದರಿಂದ ಜ್ವರ ಬಾಧಿಸಿತು.ಮದೀನದ ವಾತಾವರಣ ದೊಂದಿಗೆ ಹೊಂದಿಕೊಳ್ಳಲು ಅವರಿಗೆ ಕೊಂಚ ಸಮಯ ಹಿಡಿಯಿತು.ನೆಬಿ ಸ.ಅ ಪ್ರಾರ್ಥಿಸಿದರು.
أللهم حبب إلينا المدينة كما حببت إلينا مكة أو أشد وبارك لنا في مدها وفي صاعها
ಅಲ್ಲಾಹನೇ . ನಮಗೆ ಮಕ್ಕಾ ಹೇಗೆ ಇಷ್ಟವಾಗಿತ್ತೋ ಅದೇರೀತಿ ನಮಗೆ ಮದೀನವನ್ನು ಇಷ್ಟಗೊಳಿಸು.ಮದೀನದ ಪ್ರತಿಯೊಂದರಲ್ಲಿ ಬರ್ಕತನ್ನು ನೀಡು.
ನೆಬಿ ಸ.ಅ ರವರ ಪ್ರಾರ್ಥನೆಯ ಫಲವಾಗಿ ಮದೀನ ಭೂಮಿಯಲ್ಲಿಯೇ ಅತ್ಯಂತ ಉತ್ತಮ ಸ್ಥಳವಾಗಿ ಬದಲಾಯಿತು.
( ಗಮನಿಸಿ -ಮುಜಾಜಿರ್ ಅಂದರೆ ಮಕ್ಕಾದಿಂದ ಮದೀನಕ್ಕೆ ಹಿಜ್ರ ಬಂದವರು.
ಅನ್ಸಾರಿ ಅಂದರೆ ಮಕ್ಕಾದಿಂದ ಮದೀನಕ್ಕೆ ಬಂದ ಮುಹಾಜಿರುಗಳಿಗೆ ತಮ್ಮ ಎಲ್ಲವನ್ನು ನೀಡಿ ಸಹಾಯ ಮಾಡಿದ ಮದೀನ ನಿವಾಸಿಗಳು ).
ಮುಂದುವರಿಯುವುದು.
® ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Mob +918105745760
No comments:
Post a Comment